



ಬೈಂದೂರು: ದೈತ್ಯ ಸಮುದ್ರದಲೆ ಅಪ್ಪಳಿಸಿದ ಪರಿಣಾಮ ಮೀನುಗಾರಿಕಾ ದೋಣಿಯಲ್ಲಿದ್ದ ಮೀನುಗಾರನೋರ್ವ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಕೊಡೇರಿ ಬಂದರಿನ ಸಮೀಪ ಅರಬ್ಬೀ ಸಮುದ್ರದಲ್ಲಿ ಸೆ. 1ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಕಿರಿಮಂಜೇಶ್ವರ ಗ್ರಾಮದ ಮೋಟಿಮನೆ ನಿವಾಸಿ 44ವರ್ಷದ ಸತೀಶ್ ಖಾರ್ವಿ ಎಂದು ಗುರುತಿಸಲಾಗಿದೆ. ಇವರು ಗಣೇಶ್ ಖಾರ್ವಿ ಹಾಗೂ ರಾಮಚಂದ್ರ ಖಾರ್ವಿ ಅವರೊಂದಿಗೆ ನಿನ್ನೆ ಕೊಡೇರಿ ಬಂದರಿನಿಂದ ದೋಣಿಯಲ್ಲಿ ಬಲೆಯೊಂದಿಗೆ ಮೀನು ಹಿಡಿಯಲು ಅರಬ್ಬಿ ಸಮುದ್ರಕ್ಕೆ ಹೋಗಿದ್ದರು. ಮೀನುಗಾರಿಕೆ ಮಾಡುತ್ತಿರುವ ವೇಳೆ ದೈತ್ಯ ಅಲೆವೊಂದು ದೋಣಿಗೆ ಅಪ್ಪಳಿಸಿದ್ದು, ಇದರ ಪರಿಣಾಮ ದೋಣಿಯಲ್ಲಿದ್ದ ಸತೀಶ್ ಖಾರ್ವಿ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದರು. ತಕ್ಷಣವೇ ದೋಣಿಯಲ್ಲಿದ್ದ ಗಣೇಶ್ ಖಾರ್ವಿ ಹಾಗೂ ರಾಮಚಂದ್ರ ಖಾರ್ವಿ ಅವರು ನೀರಿನಿಂದ ಸತೀಶ್ ಅವರನ್ನು ಮೇಲಕ್ಕೆ ಎತ್ತಿ ಕೋಡೇರಿ ಬಂದರಿಗೆ ದೋಣಿಯಲ್ಲಿ ಕರೆತಂದು, ಆ ಬಳಿಕ ರಿಕ್ಷಾದಲ್ಲಿ ಕಿರಿಮಂಜೇಶ್ವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಸತೀಶ್ ಖಾರ್ವಿಯವರನ್ನು, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರಕ್ಕೆ ಹೋಗುವಂತೆ ಸೂಚಿಸಿದ್ದರು, ಅದರಂತೆ ಕುಂದಾಪುರ ವಿನಯ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಸತೀಶ್ ಖಾರ್ವಿ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.