


ಕಾರ್ಕಳ, ತುರ್ತು ಸಂದರ್ಭದಲ್ಲಿ ಬಡರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಜೆಕಾರಿನ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು ಆರಂಭಿಸಿರುವ ಸಾರಥಿ ಆಂಬುಲೆನ್ಸ್ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ನೂತನ ಸಾರಥಿ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿ, ಆಂಬುಲೆನ್ಸ್ ಅಗತ್ಯವಿಲ್ಲ ರಿಕ್ಷಾ ಚಾಲಕರೇ ನಮ್ಮ ಜೊತೆಗಿನ ಆಂಬುಲೆನ್ಸ್. ತುರ್ತು ಸಂದರ್ಭಗಳಲ್ಲಿ ಗ್ರಾಮೀಣ ಭಾಗದಲ್ಲಿ ರಿಕ್ಷಾ ಚಾಲಕರು ಜೀವ ರಕ್ಷರಾಗಿ ಧಾವಿಸುತ್ತಿರುವುದು ಅಭಿನಂದನೀಯ. ಆರೋಗ್ಯ ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲು.ಈ ನಿಟ್ಟಿನಲ್ಲಿ ಅಜೆಕಾರಿನ ರಿಕ್ಷಾ ಚಾಲಕ ಮಾಲಕ ಸಂಘದವರು ಆರಂಭಿಸಿರುವ ಆಂಬುಲೆನ್ಸ್ ಸೇವೆಯನ್ನು ಅಜೆಕಾರಿನ ಸುತ್ತಮುತ್ತಲಿನ ರೋಗಿಗಳು ಪಡೆಯುವಂತಾಗಲಿ ಎಂದರು. ಅಜೆಕಾರು ವೇಗವಾಗಿ ಬೆಳೆಯುತ್ತಿರುವ ಪೇಟೆಯಾಗಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡಕ್ಕೆ ಮುಂದಿನ ಡಿಸೆಂಬರ್ ಒಳಗಾಗಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು. '

ರಿಕ್ಷಾ ಚಾಲಕರ ಆರೋಗ್ಯ ವಿಮೆಯನ್ನು ವಿಕಾಸ ಸೇವಾ ಸಂಸ್ಥೆಯು ಮಣಿಪಾಲ ಆಸ್ಪತ್ರೆಯ ಸಹಕಾರದಿಂದ ಮಾಡಿತ್ತು. ಈ ವರ್ಷವೂ ಆರೋಗ್ಯ ವಿಮೆ ಮಾಡುವ ಕುರಿತು ಮಣಿಪಾಲ ಆಸ್ಪತ್ರೆಯ ಜೊತೆ ಚರ್ಚಿಸಲಾಗುವುದು ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಧಾಕರ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಬೆಂಬಲಿಸಬೇಕು. ರಿಕ್ಷಾ ಚಾಲಕರು ಮಾಡಿರುವ ಈ ಸೇವಾಕಾರ್ಯ ಎಲ್ಲರಿಗೂ ಮಾದರಿ. ದಾರಿಯಲ್ಲಿ ಬಿದ್ದವರನ್ನು ಎತ್ತಿ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯುವ ಸಹೃದಯತೆ ಕೇವಲ ರಿಕ್ಷಾ ಚಾಲಕರಲ್ಲಿ ಮಾತ್ರ ಕಾಣಲು ಸಾಧ್ಯ. ಅಜೆಕಾರಿನಲ್ಲಿ ಆರಂಭವಾದ ಸಾರಥಿ ಆಂಬುಲೆನ್ಸ್ ಸೇವೆ ಹೆಚ್ಚು ಮಂದಿಗೆ ಇದರ ಅವಶ್ಯಕತೆ ಬೀಳದೇ ಇರಲಿ,ಅಂದರೆ ಎಲ್ಲರೂ ಆರೋಗ್ಯವಾಗಿರಲಿ, ಇದರಿಂದ ವಾಹನದ ಲೋನ್ ಕಟ್ಟಲಿಕ್ಕೆ ಕಷ್ಟವಾದ್ರೆ ನನ್ನ ಬಳಿ ಬನ್ನಿ ಎಂದು ಧೈರ್ಯ ತುಂಬಿದರು. ಜೀವ ಎನ್ನುವುದು ಅತ್ಯಮೂಲ್ಯ ಅದು ಕೋಟಿ ಕೊಟ್ಟರೂ ಮತ್ತೆ ಸಿಗಲಾರದು ಆದ್ದರಿಂದ ಜೀವರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಡಾ.ಸಂತೋಷ್ ಕುಮಾರ್ ಶೆಟ್ಟಿ, ವೇ.ಮೂ. ಅರುಣ್ ಭಟ್ ಎಣ್ಣೆಹೊಳೆ, ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ ಸುಭವಿ, ಅಜೆಕಾರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಶಾಂತಿರಾಜ ಜೈನ್,ವೈದ್ಯಾಧಿಕಾರಿಗಳಾದ ಡಾ. ಚಂದ್ರಿಕಾ ಕಿಣಿ, ಡಾ.ಅನುಷಾ ಶೆಟ್ಟಿ, ಮರ್ಣೆ ಪಂಚಾಯತಿ ಪಿಡಿಓ ಅಂಕಿತಾ ನಾಯಕ್, ಮುಂತಾದವರು ಉಪಸ್ಥಿತರಿದ್ದರು. ಕಾರ್ಕಳ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಸದಾನಂದ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜೆಕಾರು ರಿಕ್ಷಾ ಚಾಲಕ ಮಾಲಕ ಸಂಘದ ಅಶೋಕ್ ಶೆಟ್ಟಿ ವಂದಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.