



ಕಾರ್ಕಳ: ಮಕ್ಕಳಿಗೆ ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸ ಪ್ರತಿ ಮನೆಯಲ್ಲಿ ಆರಂಭವಾಗಬೇಕು ಎಂದು ಕೇಮಾರು ಸಾಂದೀಪಿನಿ ಮಠದ ಈಶ ವಿಠ್ಠಲದಾಸ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಪಳ್ಳಿ ಮಹಾಂಕಾಳಿ ಮಠದಲ್ಲಿ(ಮಂಗಲ್ದಿಮಠ) ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು, ಅವರು ದಾರಿ ತಪ್ಪದಂತೆ ಎಚ್ಚರಿಸುವ ಕಾರ್ಯ ಹೆತ್ತವರಿಂದ ತುರ್ತಾಗಿ ಆಗಬೇಕಾಗಿದೆ. ಎಲ್ಲಿ ಮುಗ್ಧತೆ ಇದೆಯೋ ಅಲ್ಲಿ ದೇವರಿದ್ದಾನೆ. ಮುಗ್ಧತೆಯಿಂದ ಮನ:ಪೂರ್ವಕವಾಗಿ ದೇವರನ್ನು ಪೂಜಿಸಿದಾಗ ನಮ್ಮ ಇಷ್ಟಾರ್ಥಗಳು ನೆರವೇರಲು ಸಾಧ್ಯ ಎಂದರು.
ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ದೈವ, ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಅಭಿವೃದ್ಧಿ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮೀಣ ಜನತೆ ದೈವಾರಾಧನೆಯ ಚಟುವಟಿಕೆಗಳಿಗೆ ಎಂದೂ ಕಡಿಮೆ ಮಾಡಿದವರಲ್ಲ. ತಮ್ಮ ಸಂಕಷ್ಟದ ನಡುವೆಯೂ ಭಕ್ತಿ, ಶ್ರದ್ಧೆಯಿಂದ ಅವೆಲ್ಲವನ್ನೂ ಆಚರಿಸಿಕೊಂಡು ಬಂದವರು. ಪ್ರಸ್ತುತ ರಾಜ್ಯ ಸರ್ಕಾರ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅನುಗ್ರಹ ಸಂದೇಶ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಾಬುರಾಜೇಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿಸಚಿವ ಬಿ.ನಾಗರಾಜ ಶೆಟ್ಟಿ, ಚಿತ್ರನಟ ಶಿವಧ್ವಜ್, ಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಅಮೀನ್, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಅಡಪಾಡಿ ಉಮಾಮಹೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ಉದ್ಯಮಿ ಉದಯಕುಮಾರ್ ಶೆಟ್ಟಿ, ಬೋಜರಾಜ ಹೆಗ್ಡೆ, ರಮೇಶ್ ಹೆಗ್ಡೆ, ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ಅಧ್ಯಕ್ಷ ರಘುನಾಥ ಶೆಟ್ಟಿ, ಮಂಗಲ್ದಿ ಮಠದ ಆಡಳಿತ ಮೊಕ್ತೇಸರ ಬಾಬುರಾಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.