



ಉಡುಪಿ: ಕಾನನದ ನಡುವಿನ ಸುಂದರ ರಮಣೀಯ ಪುಣ್ಯಭೂಮಿ ಕಜ್ಕೆಯಲ್ಲಿ ಶ್ರೀ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರ ನೇತ್ರತ್ವದಲ್ಲಿ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇಗುಲ ನಿರ್ಮಾಣಗೊಂಡಿದ್ದು ಇದೇ ೨೧ರಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ಲೋಕಾರ್ಪಣೆಯ ಕಾರ್ಯ ನೆರವೇರಲಿದೆ. ಅರಣ್ಯದಲ್ಲಿ ಸುತ್ತುವರಿದಿರುವ ಕಜ್ಕೆಯಲ್ಲಿ ಆದಿಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕೊಲ್ಲೂರಿಗೆ ಸಂಚರಿಸುವಾಗ ಮಧ್ಯಾಹ್ನದ ಹೊತ್ತು ಇಲ್ಲಿ ಭಿಕ್ಷೆ ಪಡೆದಿದ್ದರು. ಸಹಸ್ರಾರು ವರ್ಷಗಳಿಂದ ಸಾನಿಧ್ಯ ಭೂಗತವಾಗಿದ್ದು ಜಾಗವು ಖಾಸಗಿಯವರಲ್ಲಿ ಇತ್ತು. ಇದೀಗ ಕಜ್ಕೆಯವರಾದ ಕೃಷ್ಣಯ್ಯ ಶೆಟ್ಟಿಯವರು ಮತ್ತು ಶ್ರೀಧರ ಕಾಮತ್ ಎಂಬವರು ದೇವಸ್ಥಾನ ನಿರ್ಮಾಣಕ್ಕೆ ೨ ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮದ ಕಜ್ಕೆಯಲ್ಲಿ ಸುಮಾರು ೫ ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರ ಭವ್ಯ ದೇವಸ್ಥಾನ ನಿರ್ಮಾಣಗೊಂಡಿದೆ. ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ ಅರೇಮಾದನಹಳ್ಳಿ ಅರಕಲಗೂಡು ಹಾಸನದ ಶಾಖಾ ಮಠವು ಕಜ್ಕೆಯಲ್ಲಿ ನಿರ್ಮಾಣಗೊಂಡಿದ್ದು ಶ್ರೀ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರು ಭಕ್ತರನ್ನು ಹರಸುತ್ತಿದ್ದಾರೆ. ಶ್ರೀಮಠದ ಪಕ್ಕದಲ್ಲೇ ಶ್ರೀ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ದೇವಸ್ಥಾನವು ಸರ್ವರ ಸಹಕಾರದೊಂದಿಗೆ ನಿರ್ಮಾಣಗೊಂಡಿದೆ. ಶ್ರೀ ಅನ್ನಪೂರ್ಣೇಶ್ವರಿಯ ಜೊತೆಗೆ ಶ್ರೀಗಣಪತಿ ದೇವರು, ಶ್ರೀ ಆದಿಶಂಕರಾಚಾರ್ಯರು ಶಿಲಾ ಬಿಂಬ ಪ್ರತಿಷ್ಠೆ ಹಾಗೂ ನಾಗದೇವರ ಸನ್ನಿಧಿಯ ಪ್ರತಿಷ್ಠೆಯು ಫೆಬ್ರವರಿ ೨೧ರಂದು ನೆರವೇರಲಿದೆ. ೧೮ರಂದು ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. ಫೆಬ್ರವರಿ ೧೩ ರಿಂದ ಆರಂಭಗೊಂಡು ೨೧ರ ತನಕ ಶಿಲಾ ಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಭಾಭಿಷೇಕವು ನಡೆಯಲಿದೆ. ನಾಡಿನ ವಿವಿಧ ಶ್ರೀಗುರುಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು ಪುಣ್ಯಕಾರ್ಯದಲ್ಲಿ ಭಾಗಯಾಗಲಿದ್ದಾರೆ. ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರ ಅಧ್ಯಕ್ಷತೆಯ ಶ್ರೀ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾಕುಂಭಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕಜ್ಕೆ ಕಾಶೀನಾಥ ಶೆಣೈ, ದೇವಸ್ಥಾನ ನಿರ್ಮಾಣ ಮತ್ತು ಮಹಾಕುಂಭಾಭಿಷೇಕ ಸಮಿತಿಯ ಸರ್ವ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಸಂಘಸಂಸ್ಥೆಗಳ ಸರ್ವ ಸದಸ್ಯರು ಸೇರಿ ಸರ್ವರೂ ಶ್ರಮಿಸುತ್ತಿದ್ದಾರೆ. ನಿರಂತರವಾಗಿ ಸ್ಥಳೀಯ ಮತ್ತು ಮಂಗಳೂರು, ಕೊಪ್ಪ ಶೃಂಗೇರಿ ಸಹಿತ ವಿವಿದೆಡೆಯ ಭಕ್ತ ಸಮೂಹದಿಂದ ಕರಸೇವೆಯೂ ನಡೆಯುತ್ತಿದೆ. ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರಿಂದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾ ವಿಗ್ರಹ ರಚನೆ. : ಆನಂದ ಆಚಾರ್ಯ ಸುರತ್ಕಲ್ ವಾಸ್ತುಶಿಲ್ಪಿಯಾಗಿ ದೇವಸ್ಥಾನದಲ್ಲಿ ಸೇವೆಸಲ್ಲಿಸಿದ್ದಾರೆ. ಶಿಲಾ ಶಿಲ್ಪಿಯಾಗಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ, ಕಾಷ್ಠ ಶಿಲ್ಪಿಯಾಗಿ ಬಂಡಿಮಠ ಶ್ರೀಧರ ಆಚಾರ್ಯ ದೇವಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ದೇವರ ಮೂರ್ತಿ ರಚಿಸಿದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾ ವಿಗ್ರಹವನ್ನು ರಚಿಸಿದ್ದಾರೆ. ಶ್ರೀಗಣಪತಿ ದೇವರ ವಿಗ್ರಹವನ್ನು ಪ್ರಕಾಶ ಆಚಾರ್ಯ ಮೈಸೂರು ಮತ್ತು ಆದಿಶಂಕಾರಾಚಾರ್ಯರ ವಿಗ್ರಹವನ್ನು ಶಿಲ್ಪಿ ಕಾರ್ಕಳ ಅತ್ತೂರಿನ ರಾಮಚಂದ್ರ ಆಚಾರ್ಯ ರಚಿಸಿದ್ದಾರೆ. ಶ್ರೀ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರು ಪರಮ ಪೂಜ್ಯ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಸಹಿತ ನಾಡಿನ ವಿವಿಧ ಮಠಾದೀಶರು ಭಾಗವಹಿಸುವರು.
...... ಅಂದು ಆದಿಶಂಕರಾಚಾರ್ಯರು ಕಾಲಿಟ್ಟ ಕಜ್ಕೆ ಈಗ ಶ್ರೀ ಅನ್ನಪೂರ್ಣೇಶ್ವರಿಯ ಪುಣ್ಯ ಕ್ಷೇತ್ರವಾಗಿದೆ. ಸಹಸ್ರಾರು ವರ್ಷಗಳಿಂದ ಭೂಗತವಾಗಿದ್ದ ಕ್ಷೇತ್ರಕ್ಕೆ ಮರುಚೈತನ್ಯ ನೀಡುವ ಸುಯೋಗ ನನ್ನ ಪಾಲಿಗೆ ಒದಗಿ ಬಂದಿದೆ. ಕಜ್ಕೆಯ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ ಅವರು ತಮ್ಮ ಅಮೂಲ್ಯವಾದ ೨ ಎಕರೆ ಜಮೀನನ್ನು ದೇಗುಲಕ್ಕಾಗಿ ದಾನ ನೀಡಿದ್ದಾರೆ. ನಮ್ಮ ಶ್ರೀಮಠದ ಶಾಖಾ ಮಠ ಕೂಡ ಇಲ್ಲಿ ಕಾರ್ಯಚರಿಸುತ್ತಿದೆ. ಭಕ್ತಾದಿಗಳ ಸಹಕಾರದಿಂದ ಭವ್ಯ ದೇಗುಲ ನಿರ್ಮಾಣಗೊಂಡಿದೆ. ದಟ್ಟ ಅರಣ್ಯದ ನಡುವೆ ಈಗ ದೇವಿಭೂಮಿ ನಿರ್ಮಾಣ ಗೊಂಡು ಕಜ್ಕೆ ಶ್ರೀಕ್ಷೇತ್ರವಾಗಿದೆ. ಎಲ್ಲಾ ಕಾರ್ಯವೂ ಸುಗಮವಾಗಿ ನಡೆಯುತ್ತಿರುವುದು ಕಂಡು ಸಂತಸವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.