


ಹೆಬ್ರಿ, ಏ.27 : ಇತಿಹಾಸ ಪ್ರಸಿದ್ಧ ಶಿವಪುರ ಶ್ರೀ ಶಂಕರದೇವ ದೇವಸ್ಥಾನದಲ್ಲಿ ನಡೆಯಲಿರುವ ಮಹತ್ವದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಭಕ್ತಿಭಾವ ಮತ್ತು ವೈಭವದಿಂದ ಹೊರೆಕಾಣಿಕೆ ಮೆರವಣಿಗೆ ಭಾನುವಾರ ನೆರವೇರಿತು. ಗಣಪತಿ ಹಾಗೂ ಅನ್ನಪೂರ್ಣೇಶ್ವರೀ ದೇವಿಯ ಪುನಃ ಪ್ರತಿಷ್ಠಾ ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ, ಶ್ರೀ ಶಂಕರಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀಮನ್ಮಹಾರಥೋತ್ಸವದ ಪೂರ್ವಭಾವಿಯಾಗಿ ಈ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.
ಕಾರ್ಯಕ್ರಮಕ್ಕೆ ಶಾಸಕ ಮತ್ತು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು. ಶಿವಪುರದ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಭಕ್ತರು ಭಕ್ತಿಪೂರ್ವಕವಾಗಿ ಸಮರ್ಪಿಸಿದ ಹೊರೆಕಾಣಿಕೆಯನ್ನು ಶಿವಪುರ ಪೇಟೆಯಿಂದ ದೇವಸ್ಥಾನಕ್ಕೆ ವೈಭವದ ಮೆರವಣಿಗೆಯ ಮೂಲಕ ತರಲಾಯಿತು.
ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಚೆಂಡೆ ವಾದ್ಯಗಳ ನಾದ, ಮಹಿಳಾ ಭಜನಾ ಮಂಡಳಿಗಳ ಭಕ್ತಿಗೀತೆಗಳು ಹಾಗೂ ವೈವಿಧ್ಯಮಯ ವೇಷಭೂಷಣಗಳು ಗಮನ ಸೆಳೆದವು. ಭಕ್ತರು ಹರ್ಷೋದ್ಗಾರಗಳೊಂದಿಗೆ ಭಾಗವಹಿಸಿ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮೆರವಣಿಗೆ ಸಾಗಿದ ಮಾರ್ಗಗಳಲ್ಲಿ ಭಕ್ತರು ದೀಪಾರಾಧನೆ ಮಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವ ಭಟ್, ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೂರ್ಸಾಲು ಗೋಕುಲದಾಸ ನಾಯಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪೂನಾ ಉದ್ಯಮಿ ಹರೀಶ ಶೆಟ್ಟಿ ಚಿಟ್ಟೆಬೆಟ್ಟು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್, ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್ ಹಾಗೂ ವಿವಿಧ ಸಮಿತಿಗಳ ಪ್ರಮುಖರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಹಾಗೂ ಸದಸ್ಯರಾದ ಸಂತೋಷ ಕುಮಾರ್ ಶೆಟ್ಟಿ ನಾಯರಕೋಡು, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್ ಶಿವಪುರ, ಆರ್ಥಿಕ ಸಮಿತಿ ಸಂಚಾಲಕ ಸುರೇಶ ಶೆಟ್ಟಿ ಹುಣ್ಸೆಯಡಿ, ಚಂದ್ರಶೇಖರ ಶೆಟ್ಟಿ, ಡಾ. ಗುರುಪ್ರಸಾದ್ ಕೊಡಂಚ, ಜಗನ್ನಾಥ ಕುಲಾಲ್, ರಮೇಶ್ ಕುಮಾರ್, ಲಕ್ಷ್ಮೀನಾರಾಯಣ ನಾಯಕ್ ಕನ್ಯಾನ, ಶಿವಪ್ರಸಾದ್ ಅಡಿಗ, ರಮಾನಂದ ಶೆಟ್ಟಿ, ಗಣೇಶ ಹಾಂಡ, ಮಹಾಬಲೇಶ್ವರ ಅಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕರಾದ ಬೈಕಾಡಿ ಮಂಜುನಾಥ ರಾವ್ ಎಲಿಕೋಡು ಅವರ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ಸದಸ್ಯರ ಸಹಕಾರದಿಂದ ಹೊರೆಕಾಣಿಕೆ ಮೆರವಣಿಗೆ ಯಶಸ್ವಿಯಾಗಿ ನೆರವೇರಿತು.
ಮುಂದಿನ ದಿನಗಳಲ್ಲಿ ನಡೆಯಲಿರುವ ಬ್ರಹ್ಮಕಲಶಾಭಿಷೇಕ ಮತ್ತು ಮಹಾರಥೋತ್ಸವ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.