



ಧರ್ಮಸ್ಥಳದ ಸಮೀಪ ನೇತ್ರಾವತಿಯ ಪಕ್ಕದ ಕಾಡಿನಲ್ಲಿ ಭೀಕರ ಅತ್ಯಾಚಾರಕ್ಕೀಡಾಗಿ (Rape case) ಕೊಲೆಗೀಡಾಗಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ಮತ್ತೆ ಸಣ್ಣಗೆ ಆದ್ರೆ ಗಟ್ಟಿ ದನಿಯಲ್ಲಿ ಮರುಜೀವ ಬರುತ್ತಿದೆ. ಅದೂ ಮೊನ್ನೆ ಸಿಬಿಐ ವಿಶೇಷ ಕೋರ್ಟ್ ನಲ್ಲಿ, ಇದ್ದೊಬ್ಬ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಧುತ್ತೆಂದು ಉದ್ಭವ ಆಗಿದೆ. ಸೌಜನ್ಯ ಪೋಷಕರು ಮತ್ತು ಹೋರಾಟಗಾರರು ಮಾಧ್ಯಮಗಳ ಮುಂದೆ ಬಂದು ತಮ್ಮ ನೋವನ್ನು ಮತ್ತು ಬೇಸರವನ್ನು ಮತ್ತು ನಮ್ಮ ನ್ಯಾಯ ವ್ಯವಸ್ಥೆಯ ಮೇಲಿನ ಒಟ್ಟಾರೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆಗಲೇ ಆಣೆ – ಪ್ರಮಾಣ – ಹರಕೆಯ ಮಾತು ಶುರುವಾಗಿತ್ತು. ಈಗ ಸೌಜನ್ಯಾಳ ಕುಟುಂಬವು ಕರಾವಳಿ ಕರ್ನಾಟಕ ನಂಬಿಕೊಂಡು ಬಂದಂತಹ ಬಹಳ ದೊಡ್ಡ ದೈವ ಒಂದಕ್ಕೆ, ಕಾರ್ಮಿಕ ಕ್ಷೇತ್ರಕ್ಕೆ ಹರಕೆ ಇಟ್ಟಿದೆ.
ಸೌಜನ್ಯಳ ಮಾವ ಇದೀಗ ದೈವ ದೇವರಿಗೆ ಹರಕೆ ಹೊತ್ತಿರುವುದು ಸುದ್ದಿಯಾಗಿದೆ. ಸೌಜನ್ಯ ಕೊಲೆಗೆ ಕಾರಣವಾದ ಅಪರಾಧಿಗಳಿಗೆ ಇನ್ನು ಆರು ತಿಂಗಳ ಒಳಗಾಗಿ ಸರಿಯಾದ ಶಿಕ್ಷೆಯಾಗಬೇಕು, ಹಾಗಾದರೆ ನಾನು ಹರಕೆ ತೀರಿಸುತ್ತೇನೆ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ. ನಾವು ಆಪ್ತರಕ್ಷಕರು ಎಂದುಕೊಂಡು ಇರುವ ಪೊಲೀಸರು, ವೈದ್ಯರು ನಾರಾಯಣ ಹರಿ ಎಂದು ದೇವರಲ್ಲಿ ವೈದ್ಯರಲ್ಲಿ ಕಾಣುವ ವೈದ್ಯರುಗಳು, ಜನಪದ ಕೆಲಸ ಮಾಡಬೇಕಾದ ಅಧಿಕಾರಿಗಳು, ಸರಿಯಾಗಿ ತನಿಖೆ ನಡೆಸಿದ ತನಿಖಾ ಸಂಸ್ಥೆಗಳು, ಜನರ ಕಷ್ಟ ಇರುವವರ ಪರ ಯಾವತ್ತೂ ನಿಲ್ಲಬೇಕಾದ ರಾಜಕಾರಣಿಗಳು, ಒಟ್ಟಾರೆ ಭವ್ಯ ಭಾರತದ ಬಡಕಲು ವ್ಯವಸ್ಥೆ ಕೈ ಚೆಲ್ಲಿ ಕೂತ ಸಂದರ್ಭದಲ್ಲಿ ಸೌಜನ್ಯ ಗೌಡ ಕುಟುಂಬ ದೈವ ದೇವರ ಮೊರೆ ಹೋಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯಾ ಗೌಡ ಮಾವ ವಿಠಲ ಗೌಡ ಪೋಸ್ಟ್ ಒಂದನ್ನು ಹಾಕಿದ್ದಾರೆ. ಸೌಜನ್ಯ ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವಗಳಿಗೆ ಬಂಗಾರ ನಾಲಿಗೆ, 1 ದಿನದ ನೇಮೋತ್ಸವವನ್ನು ನೀಡುತ್ತೇವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಬೆಳ್ಳಿ ರಥ, ಅಣ್ಣಪ್ಪನಿಗೆ ಬಂಗಾರದ ಕಡಸಾಲೆ ಹರಕೆಯಾಗಿ ಒಪ್ಪಿಸುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವಾರಗಳ ಹಿಂದಷ್ಟೇ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ನನ್ನು ದೋಷಮುಕ್ತಗೊಳಿಸಿದ್ದು, ನ್ಯಾಯದ ಪರ ಹೋರಾಟ ನಡೆಸಿದ ಹೋರಾಟಗಾರರು ಕಿಡಿಕಾರಿದ್ದು, ಹಲವಾರು ಪತ್ರಿಕಾಗೋಷ್ಠಿ ನಡೆಸಿದ್ದು, ನ್ಯಾಯದ ವಿಚಾರ ಕಾರ್ಣಿಕ ಸ್ಥಳ ಈಗ ಕಾನತ್ತೂರು ನೆಲಕ್ಕೆ ಬಂದು ನಿಂತಿದೆ.
ಈ ಮಧ್ಯೆ ದಿ.ಸೌಜನ್ಯ ಹೆತ್ತವರು ಮುಂದಿನ ಆರು ತಿಂಗಳ ಒಳಗಾಗಿ ನೈಜ ಆರೋಪಿಯ ಪತ್ತೆಯಾಗಬೇಕು, ಅಲ್ಲದೇ ಕಠಿಣ ಶಿಕ್ಷೆಗೆ ಗುರಿಯಾಗಬೇಕು ಎಂದು ಕಾರ್ಣಿಕ ಸ್ಥಳ ಕಾನತ್ತೂರು ನಾಲ್ವರ್ ದೈವಕ್ಕೆ ಬಂಗಾರದ ನಾಲಗೆ, ಧರ್ಮಸ್ಥಳ ಮಂಜುನಾಥನಿಗೆ ಬೆಳ್ಳಿ ರಥ ಹಾಗೂ ಅಣ್ಣಪ್ಪ ದೈವಕ್ಕೆ ಬಂಗಾರದ ಕಡ್ಸಳೆ ಹರಕೆಯಾಗಿ ಒಪ್ಪಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಹರಿದಾಡಿದ್ದು ಆರೋಪಿಗಳಿಗೆ ಮತ್ತೊಮ್ಮೆ ನಡುಕ ಹುಟ್ಟಿಸಿದೆ. ಅಂದಿನ ಘಟನೆ ನಡೆದ ಬಳಿಕ ನೈಜ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಇಲ್ಲಸಲ್ಲದ ಆರೋಪ ಹೊರಿಸಿ ಮಾನಸಿಕ ಅಸ್ವಸ್ಥನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎನ್ನುವ ಮಾತುಗಳು ಗಂಭೀರವಾಗಿ ಕೇಳಿ ಬಂದಿದ್ದರೂ ತನಿಖೆಯಲ್ಲಿ ಆತನೇ ಆರೋಪಿ ಎನ್ನುವುದನ್ನು ಹೇಳಲಾಗಿತ್ತು. ಆದರೆ ನಾಗರೀಕ ಸಮಾಜದ ನಂಬಿಕೆ ನ್ಯಾಯಾಲಯದಲ್ಲಿ ಸ್ಪಷ್ಟವಾಗಿದ್ದು, ಅವತ್ತು ಧರ್ಮಸ್ಥಳದ ಸಿಬ್ಬಂದಿ ಹಿಡಿದು ಕೊಟ್ಟಿದ್ದ ಆರೋಪಿ ಸಂತೋಷ್ ರಾವ್ ನನ್ನು ಇದೀಗ ಕೋರ್ಟ್ ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಕೃತ್ಯ ಎಸಗಿದ ಆರೋಪಿಗಳು ಬೇರೆಯೇ ಇದ್ದಾರೆ ಎನ್ನುವುದು ಹಾಗಾಗಿ ಖಚಿತವಾಗಿದೆ.
ಸದ್ಯ ಆಕೆಯ ಕುಟುಂಬ, ಹೆತ್ತವರು ಮಾಡಿಕೊಂಡಿರುವ ಹರಕೆಗೆ ದೈವ-ದೇವರುಗಳು ಒಲಿದು ನೈಜ ಆರೋಪಿಗಳ ಪತ್ತೆಯಾಗಲಿ, ಆ ಮೂಲಕ ಧರ್ಮಸ್ಥಳದಲ್ಲಿ ನಡೆದ ಅಮಾಯಕ ಹೆಣ್ಣು ಮಗಳ ಸಾವಿಗೆ ಹಲವು ವರ್ಷಗಳ ಬಳಿಕವಾದರೂ ನ್ಯಾಯಾ ದೊರಕಲಿ, ತಿಮರೋಡಿ ಹೋರಾಟಕ್ಕೆ ಫಲ ದೊರಕಲಿ ಎನ್ನುವುದು ಸ್ವಸ್ಥ ಸಮಾಜದ ಹಾರೈಕೆಯಾಗಿದೆ.
ಸೌಜನ್ಯ ಹತ್ಯೆ ಪ್ರಕರಣ ಹನ್ನೊಂದು ವರ್ಷದ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದ ಕಾಡಿನಲ್ಲಿ ಬೆಳಕಿಗೆ ಬಂದಿತ್ತು. ಭೀಕರ ಅತ್ಯಾಚಾರಕ್ಕೀಡಾಗಿ ಸೌಜನ್ಯಳನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಆರೋಪಿ ಎಂದು ಬಂಧಿಸಲಾಗಿತ್ತು. ಹನ್ನೊಂದು ವರ್ಷದ ನಂತರ ಆತ ನಿರಪರಾಧಿ ಎಂದು ಕೋರ್ಟ್ ಬಿಡುಗಡೆ ಮಾಡಿದೆ. ಹಾಗಾದರೆ ಅಪರಾಧಿ ಯಾರು ಅನ್ನುವ ಪ್ರಶ್ನೆ ಇದೀಗ ಎದ್ದಿದೆ. ಸೌಜನ್ಯ ಹತ್ಯೆ ನಡೆಸಿದವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.