

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವಾರದ ವಿಶೇಷ ಸಭೆಯಲ್ಲಿ ವೈದ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಲ್ಲಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸಾರ್ವಜನಿಕರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಡಾ. ಕೀರ್ತಿನಾಥ್ ಬಲ್ಲಾಳ್ ಅವರು ಪ್ರಸ್ತುತ ಕೆಎಂಸಿ ಆಸ್ಪತ್ರೆ, ಮಣಿಪಾಲಕ್ಕೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕೀರ್ತಿನಾಥ್ ಬಲ್ಲಾಳ್ ಅವರು ಕಾರ್ಕಳದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು, ಸಾರ್ವಜನಿಕರು ಹಾಗೂ ಸಹೋದ್ಯೋಗಿಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಪೂರ್ವಾಧ್ಯಕ್ಷ ರೊ. ಸುರೇಂದ್ರ ನಾಯಕ್ ಅವರು ಡಾ. ಕೀರ್ತಿನಾಥ್ ಬಲ್ಲಾಳ್ ಅವರನ್ನು ಸಭೆಗೆ ಪರಿಚಯಿಸಿ, ರೋಟರಿ ಕ್ಲಬ್ ಮತ್ತು ರೋಟರಿ ಆಸ್ಪತ್ರೆಯ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಕ್ಲಬ್ನ 'ಗ್ಲೋಬಲ್ ಗ್ರಾಂಟ್' ಯೋಜನೆಯಡಿ ಆಸ್ಪತ್ರೆಗೆ ಸ್ಥಾಪಿಸಲಾದ ಟ್ರಾಮಾ ಸೆಂಟರ್ಗೆ ಡಾ. ಬಲ್ಲಾಳ್ ಅವರು ನೀಡಿದ ಸಹಕಾರವನ್ನು ಶ್ಲಾಘಿಸಿ ಅಭಿನಂದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಆಸ್ಪತ್ರೆಯ ನೂತನ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಭಾಗವಹಿಸಿ, ಡಾ. ಕೀರ್ತಿನಾಥ್ ಬಲ್ಲಾಳ್ ಅವರ ಕಾರ್ಯವೈಖರಿ, ನಾಯಕತ್ವ ಹಾಗೂ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯವನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ರೋಟರಿ ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದು, ಅವರನ್ನು ಸಹ ಗೌರವಿಸಲಾಯಿತು.
ಕ್ಲಬ್ನ ಮಾರ್ಗದರ್ಶಕರಾದ ರೊ. ಡಾ. ಭರತೇಶ್ ಆದಿರಾಜ್ ಅವರು ರೋಟರಿ ಸಂಸ್ಥೆಯ ಸಾಮಾಜಿಕ ಸೇವೆಗಳು, ವೈದ್ಯಕೀಯ ಕ್ಷೇತ್ರಕ್ಕೆ ರೋಟರಿಯ ಕೊಡುಗೆ ಹಾಗೂ ಸ್ಥಳೀಯ ಆಸ್ಪತ್ರೆಗಳ ಅಭಿವೃದ್ಧಿಯಲ್ಲಿ ಕ್ಲಬ್ಗಳ ಪಾತ್ರವನ್ನು ವಿವರಿಸಿ, ಡಾ. ಕೀರ್ತಿನಾಥ್ ಬಲ್ಲಾಳ್ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರೊ. ಸುರೇಂದ್ರ ನಾಯಕ್ ಅವರ ತಂದೆಯವರ 81ನೇ ಜನ್ಮದಿನವನ್ನು ಕುಟುಂಬದ ಸದಸ್ಯರು, ಮುಖ್ಯ ಅತಿಥಿಗಳು ಹಾಗೂ ರೋಟರಿ ಸದಸ್ಯರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿ ಡಾ. ಸಂಜಯ್ ಕುಮಾರ್ ಅವರನ್ನು ರೊ. ಪ್ರಶಾಂತ್ ಬೆಳಿರಾಯ ಸಭೆಗೆ ಪರಿಚಯಿಸಿದರು. ಕ್ಲಬ್ ಅಧ್ಯಕ್ಷ ರೊ. ಮಂಜುನಾಥ್ ಹೆಗ್ಡೆ ಸ್ವಾಗತಿಸಿದರು. ಆನೆಟ್ ಕು. ಅವನಿ ಉಪಾಧ್ಯ ಪ್ರಾರ್ಥನೆ ಹಾಡಿದರು. ರೊ. ಚಿರಾಗ್ ರಾವ್ ರೋಟರಿ ಮಾಹಿತಿ ವಾಚಿಸಿದರು. ರೊ. ಸುಬ್ರಮಣ್ಯ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೊ. ಗಣೇಶ್ ಬರ್ಲಾಯ ವಂದಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿದ್ದು, ಬಳಿಕ ರೊ. ಸುರೇಂದ್ರ ನಾಯಕ್ ಅವರ ಕುಟುಂಬದವರು ಏರ್ಪಡಿಸಿದ್ದ ಮೃಷ್ಟಾನ್ನ ಭೋಜನದೊಂದಿಗೆ ವಿಶೇಷ ಸಭೆ ಸಂಪನ್ನಗೊಂಡಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.