



ಹೆಬ್ರಿ: ವರಂಗ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕಿ ವರಂಗ ವೀಣಾ ರಾಮಚಂದ್ರ ಭಟ್ ಅವರು ಟೇಬಲ್, ಕುರ್ಚಿ ಹಾಗೂ ಮಕ್ಕಳಿಗಾಗಿ ಸ್ಟೀಲ್ ನೀರಿನ ಬಾಟಲ್ಗಳನ್ನು ಕೊಡುಗೆಯಾಗಿ ನೀಡಿದರು. ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ಮಕ್ಕಳಿಗೆ ಸ್ಟೀಲ್ ನೀರಿನ ಬಾಟಲ್ಗಳನ್ನು ವಿತರಿಸಲಾಯಿತು. ಈ ವಸ್ತುಗಳನ್ನು ಮಾತಿಬೆಟ್ಟು ಅಮೂಲ್ಯ ಸಹಾಯ ಹಸ್ತ ಚಾರಿಟೇಬಲ್ ಟ್ರಸ್ಟ್ ಮೂಲಕ ಮಾ. 7 ರಂದು ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ಕಬ್ಬಿನಾಲೆ ರಾಮಚಂದ್ರ ಭಟ್, ಉದ್ಯಮಿ ಅಕ್ಷಯ ಜೈನ್, ನ್ಯಾಯವಾದಿ ಸುರೇಶ್ ಪೂಜಾರಿ, ಸಮಾಜಸೇವಕಿ ವೀಣಾ ಆರ್. ಭಟ್, ಅಮೂಲ್ಯ ಸಹಾಯ ಹಸ್ತ ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ವಿದ್ಯಾ ಮತ್ತು ಶಕುಂತಲಾ, ತಾಲೂಕು ಸಂಯೋಜಕಿ ಶೋಭಾ ಎಸ್. ಭಂಡಾರಿ, ಅಂಗನವಾಡಿ ಶಿಕ್ಷಕಿ ಅಶ್ವಿನಿ ಹಾಗೂ ಸಹಾಯಕಿ ವಿನೋದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಮಕ್ಕಳ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು. ಮಕ್ಕಳಲ್ಲಿ ಬಾಲ್ಯದಲ್ಲೇ ಉತ್ತಮ ಆರೋಗ್ಯ ಮತ್ತು ಪರಿಸರ ಜಾಗೃತಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ನ್ಯಾಯವಾದಿ ಹಾಗೂ ಪೋಷಕರಾದ ಸುರೇಶ್ ಪೂಜಾರಿ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.