logo
WhatsApp Image 2026-04-02 at 14.46.04.jpeg
hindalco everlast.jpeg

ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಮಣಿಪಾಲ ಭ್ರೂಣಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಜ್ಞಾನ ಕೇಂದ್ರ ಉದ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
7 Jun 2023
post image

ಮಣಿಪಾಲ, 7ನೇ ಜೂನ್ 2023:ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಇಂದು "ಮಣಿಪಾಲ ಭ್ರೂಣಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಜ್ಞಾನ ಕೇಂದ್ರ (ಮಣಿಪಾಲ್ ಸೆಂಟರ್ ಫಾರ್ ಎಂಬ್ರಿಯಾಲಜಿ & ರಿಪ್ರೊಡಕ್ಟಿವ್ ಸೈನ್ಸ್)" ಇದರ ಉದ್ಘಾಟನೆ ನಡೆಯಿತು. ಶ್ರೀ ಆಕಿಮ್ ಬುರ್ಕಾರ್ಟ್, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಕಾನ್ಸುಲ್ ಜನರಲ್, ಬೆಂಗಳೂರು ಇವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಬುರ್ಕಾರ್ಟ್ ಅವರು, ಮಾಹೆ ಮಣಿಪಾಲವು ಶಿಕ್ಷಣ, ಆರೋಗ್ಯ ಸೇವೆಯ ಶ್ರೇಷ್ಠತೆ ಮತ್ತು ಹೊಸ ಆವಿಷ್ಕಾರಗಳ ಕೇಂದ್ರವಾಗಿದೆ. ವೈದ್ಯಕೀಯ ಜ್ಞಾನವನ್ನು ಹೆಚ್ಚಿಸುವ ಬದ್ಧತೆಯೊಂದಿಗೆ, ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೈಕೆ ಮತ್ತು ಚಿಕಿತ್ಸೆ ನೀಡುತ್ತಿದೆ. ಈ ಕೇಂದ್ರದ ಉದ್ಘಾಟನೆಯು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಫಲವತ್ತತೆ ಇತರ ಸಂತಾನೋತ್ಪತ್ತಿ ಸಮಸ್ಯೆಗಳಲ್ಲಿ ಆರೋಗ್ಯವನ್ನು ಸುಧಾರಿಸುವ ಉದ್ದೇಶವನ್ನು ಪೂರೈಸುವಲ್ಲಿ ಮತ್ತೊಂದು ಪ್ರಗತಿಯನ್ನು ಸಾಧಿಸಲಿದೆ ಎಂದರು. “ಜರ್ಮನಿ ಮತ್ತು ಭಾರತವು ಕಳೆದ ಏಳು ದಶಕಗಳಲ್ಲಿ ನಿರಂತರವಾಗಿ ತಮ್ಮ ಸಂಬಂಧಗಳನ್ನು ಬಲಪಡಿಸಿದೆ, ವಿಶೇಷವಾಗಿ ಜನರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿರುವ ವೈಜ್ಞಾನಿಕ ಸಹಕಾರದಲ್ಲಿ. ಮಾನವನ ಆರೋಗ್ಯಕ್ಕೆ ಅನುಕೂಲವಾಗುವಂತೆ ಅಂತರರಾಷ್ಟ್ರೀಯ ಸಂಶೋಧನಾ ಸಹಕಾರವನ್ನು ಉತ್ತೇಜಿಸಲು ಎರಡೂ ದೇಶಗಳು ಈಗ ಒತ್ತು ನೀಡುತ್ತಿವೆ. ಮರ್ಕ್ ಮತ್ತು ಇತರ ಜರ್ಮನ್ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ವಿಶ್ವವಿದ್ಯಾನಿಲಯಗಳೊಂದಿಗೆ ತೊಡಗಿಸಿಕೊಂಡಿವೆ ಮತ್ತು ಬೆಂಗಳೂರಿನಲ್ಲಿ 135 ಬಿಲಿಯನ್ ಯುರೋ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ವಿಶ್ವದಾದ್ಯಂತ ಅತಿದೊಡ್ಡ ಸಂಶೋಧನಾ ಅಭಿವೃದ್ಧಿ ಸೌಲಭ್ಯವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿವೆ” ಎಂದು ಅವರು ಹೇಳಿದರು. ಕಾರ್ಯಕ್ರಮದ ಗೌರವ ಅತಿಥಿಯಾಗಿ ಮಾತನಾಡಿದ ಮಾಹೆ ಮಣಿಪಾಲದ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್ ಅವರು , ‘ಬಂಜೆತನಕ್ಕೆ ಚಿಕಿತ್ಸೆ ಮತ್ತು ಬಂಜೆತನ ನಿರ್ಮೂಲನೆ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಸಂಶೋಧನೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಏಕೆಂದರೆ ಇದು ಹೊಸ ಚಿಕಿತ್ಸಾ ವಿಧಾನಗಳನ್ನು ಅನ್ವೇಷಿಸಲು ಮತ್ತು ಅಸ್ತಿತ್ವದಲ್ಲಿರುವ ತಂತ್ರಗಳನ್ನು ಹೆಚ್ಚಿಸಲು ವೇದಿಕೆಯನ್ನು ಒದಗಿಸುತ್ತದೆ ಹಾಗೂ ಬಂಜೆತನದ ಮೂಲ ಕಾರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ನಮ್ಮ ಈ ಕೇಂದ್ರವು ಸಂಶೋಧನಾ ಉಪಕ್ರಮಗಳನ್ನು ಮುನ್ನಡೆಸಲು ಬದ್ಧವಾಗಿದೆ, ಅದು ನವನವೀನ ಆವಿಷ್ಕಾರಗಳಿಗೆ ಕಾರಣವಾಗಬಹುದು ಹಾಗೂ ಸಂತಾನೋತ್ಪತ್ತಿ ಔಷಧ ಮತ್ತು ಭ್ರೂಣಶಾಸ್ತ್ರದ ಚಿಕಿತ್ಸಾ ಕ್ರಮವನ್ನು ಮರುರೂಪಿಸಬಹುದು. ಭಾರತದಿಂದ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಆಸ್ಟ್ರೇಲಿಯಾ, ಸಿಂಗಾಪುರ, ಯುನೈಟೆಡ್ ಸ್ಟೇಟ್ಸ್ ಮತ್ತು ಯುಕೆ ದೇಶಗಳಲ್ಲಿ ಚೀನಾವನ್ನು ಹಿಂದಿಕ್ಕಿದೆ. ಇನ್ನು ಒಂದೆರಡು ವರ್ಷಗಳಲ್ಲಿ ಇದು ಯುರೋಪಿಯನ್ ರಾಷ್ಟ್ರಗಳಲ್ಲಿ ಹೀಗೆ ಆಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ ಡಿ ವೆಂಕಟೇಶ್ ಅವರು, 'ಜರ್ಮನ್ ಸಂಸ್ಥೆಗಳೊಂದಿಗಿನ ನಮ್ಮ ಸಹಭಾಗಿತ್ವವು ಆಫ್ರಿಕನ್ ದೇಶಗಳಿಗೆ ತಮ್ಮ ಐವಿಎಫ್ ಕೇಂದ್ರಗಳಲ್ಲಿ ಕೆಲಸ ಮಾಡಲು ಸಮರ್ಥ ಮಾನವ ಸಂಪನ್ಮೂಲಗಳನ್ನು ಉತ್ಪಾದಿಸುವ ಮೂಲಕ ಈ ಕ್ಷೇತ್ರದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಸಹಾಯ ಮಾಡುತ್ತಿದೆ. ಈ ಕೇಂದ್ರವು ಇನ್ನಷ್ಟು ಆವಿಷ್ಕಾರಗಳಿಗೆ ದಾರಿ ಮಾಡಿಕೊಡಲಿದೆ ಹಾಗೂ ಆರೋಗ್ಯ ವೃತ್ತಿಪರರನ್ನು ಸಬಲೀಕರಣಗೊಳಿಸಲಿದೆ ಮತ್ತು ಬಂಜೆತನದ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಹೊಸ ಭರವಸೆಯನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು. ಅವರು ಮಾತನಾಡುತ್ತಾ ಜೂನ್ ನಮಗೆಲ್ಲರಿಗೂ ಹೆಚ್ಚು ಸಂತೋಷದಾಯಕವಾಗಿದೆ ಏಕೆಂದರೆ ಜೂನ್ 1 ರಂದು ಪ್ರಕಟವಾದ ಟೈಮ್ಸ್ ಇಂಪ್ಯಾಕ್ಟ್ ರಾಂಕಿಂಗ್ ನಲ್ಲಿ ಮಾಹೆ ಮಣಿಪಾಲವು ವಿಶ್ವದಲ್ಲಿ ಲಿಂಗ ಸಮಾನತೆಯಲ್ಲಿ 4 ನೇ ಸ್ಥಾನ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ 25 ನೇ ಸ್ಥಾನದಲ್ಲಿದೆ ಮತ್ತುಎನ್ ಐ ಆರ್ ಎಫ್ ರಾಂಕಿಂಗ್ ನಲ್ಲಿ ವಿಶ್ವವಿದ್ಯಾಲಯ ವರ್ಗದಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿದೆ , ಎಂದರು.

ಕ್ಲಿನಿಕಲ್ ಭ್ರೂಣಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ ಸತೀಶ್ ಅಡಿಗ ಅವರು ಮಣಿಪಾಲ್ ಸೆಂಟರ್ ಫಾರ್ ಎಂಬ್ರಿಯಾಲಜಿ ಮತ್ತು ರಿಪ್ರೊಡಕ್ಟಿವ್ ಸೈನ್ಸ್‌ನ ಕುರಿತು ಅವಲೋಕನ ನೀಡುತ್ತಾ ತಂತ್ರಜ್ಞಾನ ವರ್ಗಾವಣೆಯ ವಿಷಯದಲ್ಲಿ ಜರ್ಮನಿಯೊಂದಿಗಿನ ಸಹಯೋಗವನ್ನು ಒತ್ತಿಹೇಳಿದರು, ಸಂಶೋಧನಾ ಪಾಲುದಾರಿಕೆ ಮತ್ತು ಶಿಕ್ಷಣದ ಮೂಲಕ ಫಲವತ್ತತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ಕೇಂದ್ರದ ಬೆಳವಣಿಗೆಗೆ ಇದು ಗಮನಾರ್ಹವಾಗಿ ಸಹಾಯ ಮಾಡಿದೆ ಎಂದರು . ಕೆಎಂಸಿ ಮಣಿಪಾಲದ ಡೀನ್ ಡಾ ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಪ್ರಜನನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ ಗುರುಪ್ರಸಾದ್ ಕಲ್ತೂರು ವಂದಿಸಿದರು.

2005 ರಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಕ್ಲಿನಿಕಲ್ ಎಂಬ್ರಿಯಾಲಜಿ ಉಪವಿಭಾಗವನ್ನು ಆರಂಭಿಸಿದ್ದು ಇದು ಏಷ್ಯಾದಲ್ಲಿಯೇ ಮೊದಲನೆಯದು. ಸಂಪೂರ್ಣ ಶೈಕ್ಷಣಿಕ ತರಬೇತಿ, ಸಂಶೋಧನಾ ಅನುಭವ, ನೈತಿಕತೆ ಮತ್ತು ಬಂಜೆತನಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಪ್ರಸ್ತುತ, ಬಂಜೆತನ ಮತ್ತು ಭ್ರೂಣಶಾಸ್ತ್ರ ಕ್ಷೇತ್ರದಲ್ಲಿ ಸುಧಾರಿತ ತರಬೇತಿ ಮತ್ತು ಸಂಶೋಧನೆಗಾಗಿ ಈ ಕೇಂದ್ರವು ಏಷ್ಯಾದ ಉನ್ನತ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಮನ್ನಣೆಯನ್ನು ಪಡೆದಿದೆ. ಮಿಸ್ ರಿಕಿ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.