logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪನಾ ದಿನಾಚರಣೆ ಉದ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
12 Apr 2023
post image

ಉಡುಪಿ, ಎ.12: ಸಮಾಜದಲ್ಲಿರುವ ಎಲ್ಲ ಭಾಷೆಗಳು ಇಂದು ಧ್ವೇಷದ ಕಡೆ ಹೋಗುತ್ತಿವೆ. ಎಲ್ಲ ಭಾಷೆಗಳು ಧ್ವೇಷದಲ್ಲಿ ಸಂಗಮವಾಗುತ್ತಿವೆ. ಅದನ್ನು ಪತ್ರಕರ್ತರು ಗಮನಿಸಿ ಶುದ್ಧಗೊಳಿಸುವ ಕಾರ್ಯ ಮಾಡಬೇಕು. ಇನ್ನೊಬ್ಬರ ತಪ್ಪನ್ನು ಮನಗಾಣಿಸುವ ಭಾಷೆಯನ್ನು ಪತ್ರಕರ್ತರು ಸೇರಿದಂತೆ ಎಲ್ಲರು ಉಳಿಸಬೇಕಾದ ಅಗತ್ಯ ತುಂಬಾ ಇದೆ ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ರಜತ ಮಹೋತ್ಸವದ ಪ್ರಯುಕ್ತ ಉಡುಪಿ ಗಾಂಧಿ ಆಸ್ಪತ್ರೆ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಸಂಘದ ಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಳ್ಳೆಯ ಬರಹಗಾರರು, ಪತ್ರಕರ್ತರು, ಕಲಾವಿದರಿಂದ ಸಮಾಜದ ಗೌರವ ಉಳಿಯಲು ಸಾಧ್ಯ. ಈ ಬಿಕ್ಕಟ್ಟಿನ ಸಂದರ್ಭದಲ್ಲೂ ಪತ್ರಕರ್ತರು ಹೇಗೆ ಘನತೆ ಯನ್ನು ಕಾಪಾಡಿಕೊಳ್ಳುತ್ತಾರೆ ಎಂಬುದು ಪ್ರಶ್ನೆ ಯಾಗಿದೆ. ಆದುದರಿಂದ ಈ ಘನತೆಯನ್ನು ಕಾಪಾಡಿಕೊಳ್ಳುವುದು ಪತ್ರಕರ್ತರಿಗೆ ದೊಡ್ಡ ಸವಾಲು ಆಗಿದೆ ಎಂದು ಅವರು ತಿಳಿಸಿದರು.

ಇಂದಿನ ಸ್ಪರ್ಧೆ ಮಧ್ಯೆ ಪತ್ರಕರ್ತರ ತಮ್ಮ ವರ್ತನೆ, ಭಾಷೆಯನ್ನು ಉಳಿಸಿ ಕೊಳ್ಳುವುದು ಬಹಳ ದೊಡ್ಡ ಸವಾಲು ಆಗಿದೆ. ಪತ್ರಕರ್ತರ ಬದುಕು ಹಿಂದಿನಂತೆ ಸುಲಭ ಅಲ್ಲ. ಯಾಕೆಂದರೆ ಇವತ್ತು ಪತ್ರಿಕೆ ಎಂಬುದು ಉದ್ಯಮವಾಗಿದೆ. ಸತ್ಯವಾದ ಶುದ್ಧ ಸಮಾಜ ಬೇಕಾಗಿದೆ. ಅದನ್ನು ನಿರ್ಮಿಸಲು ಪತ್ರಕರ್ತರಿಂದ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಸಂಘದ ಫೇಸ್‌ಬುಕ್ ಪೇಜ್ ಅನಾವರಣಗೊಳಿಸಿದ ಸಂಘದ ಸ್ಥಾಪಕಾ ಕೋಶಾಧಿಕಾರಿ ಹಾಗೂ ಮಂಗಳೂರು ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಆರೀಫ್ ಪಡುಬಿದ್ರಿ, ಸ್ಥಾಪನಾ ದಿನಾಚರಣೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ದಿನೇಶ್ ಕಿಣಿ ಅಲೆವೂರು, ಕಿರಣ್ ಮಂಜನಬೈಲು, ಜಯಕರ ಸುವರ್ಣ, ಗಣೇಶ್ ಪ್ರಸಾದ್ ಪಾಂಡೇಲು ಅವರನ್ನು ಸನ್ಮಾನಿಸಲಾಯಿತು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು.

ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಸನ್ಮಾನ ಪತ್ರವನ್ನು ವಾಚಿಸಿದರು. ಸ್ಥಾಪಕ ಸದಸ್ಯ ದಿನಕರ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.