


ಬೈಲೂರು, ಆ.15:** ಕಾರ್ಕಳ ತಾಲೂಕಿನ ಬೈಲೂರು ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉನ್ನತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ‘ಉನ್ನತಿ’ ತಂಡದ 5ನೇ ವರ್ಷದ ಸಂಭ್ರಮವನ್ನು ಶನಿವಾರ ಆಚರಿಸಲಾಯಿತು.
ವಾಸುದೇವ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಬೈಲೂರಿನ ಉದ್ಯಮಿ ರಾಮರಾಯ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರನಟ ಪೃಥ್ವಿ ಅಂಬರ್, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿನಾಯಕ ಜೋಗ್, ವೈದ್ಯ ಡಾ. ಶಶಿಕಿರಣ್ ಆಚಾರ್, ಉದ್ಯಮಿ ಪ್ರಶಾಂತ್ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ‘ಅಮ್ಮನ ನೆರವು’ ಚಾರಿಟೇಬಲ್ ಟ್ರಸ್ಟ್ನ ಅವಿನಾಶ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಆಶಾ ಭಾನು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉನ್ನತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಆಗಸ್ಟ್ 15ರಂದು ಕಾರ್ಕಳ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಗುತ್ತಿದೆ. ಅದರಂತೆ ಈ ಬಾರಿ ಬೈಲೂರು ಮೈನ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಉನ್ನತಿ ತಂಡದ 5ನೇ ವರ್ಷದ ಸಂಭ್ರಮವನ್ನೂ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೈಲೂರಿನ ಸಾಧಕರನ್ನು ಸನ್ಮಾನಿಸಲಾಯಿತು. ಕ್ಯಾನ್ಸರ್ ಔಷಧ ಸಂಶೋಧಕ ಡಾ. ಜಿತೇಂದ್ರ ಕಿಣಿ, ವೈದ್ಯ ಡಾ. ಶಶಿಕಿರಣ್ ಆಚಾರ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ. ಅರುಂಧತಿ ಶೆಟ್ಟಿ, ಕಾಷ್ಠಶಿಲ್ಪಿ ಹಾಗೂ ನಾಟಿ ವೈದ್ಯ ಜನಾರ್ಧನ ಆಚಾರ್ಯ, ಕೃಷಿಕ ಶಿವಾನಂದ ಶೆಟ್ಟಿ, ನಿವೃತ್ತ ಹೆಡ್ ಕಾನ್ಸ್ಟೇಬಲ್ ವಿಜಯ ದೇವಾಡಿಗ, ಶಿಕ್ಷಕ ಮೊಯ್ದಿನ್ ಎಸ್.ಕೆ., ಅಗ್ನಿವೀರ್ ಸಾಗರ್ ಆಚಾರ್ಯ, ರಾಷ್ಟ್ರಮಟ್ಟದ ವಾಲಿಬಾಲ್ ಪಟು ಮಣಿಕಂಠ ಹಾಗೂ ವೇಟ್ಲಿಫ್ಟಿಂಗ್ ಪಟು ಜೀವಿತಾ ಪೂಜಾರಿ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ 32 ವಿದ್ಯಾರ್ಥಿಗಳಿಗೆ ಒಟ್ಟು ₹2 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 15 ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಟ ಪೃಥ್ವಿ ಅಂಬರ್ ಅವರು ಉನ್ನತಿ ಚಾರಿಟೇಬಲ್ ಟ್ರಸ್ಟ್ನ ಅಧಿಕೃತ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.
ಉನ್ನತಿ ತಂಡದ ಸದಸ್ಯ ವಿನೋದ್ ಶೆಟ್ಟಿ ಸ್ವಾಗತಿಸಿದರು. ಕೌಶಿಕ್ ಅಮೀನ್ ಮುನಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕಿ ಸುಮಾ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.