



ಮನಕೆ ಮಬ್ಬು ಕವಿಯದಂತೆ.... ಕಾಯಬೇಕಿದೆ! ನಮ್ಮ ಮನಸು ಎಷ್ಟು ಸೂಕ್ಷ್ಮ ಅಂದ್ರೆ ಸಣ್ಣ ಸಣ್ಣ ವಿಷಯಕ್ಕೆಲ್ಲ ಬೇಜಾರು ಮಾಡಿಕೊಳ್ಳುತ್ತೆ, ಮುದುಡಿಕೊಳ್ಳುತ್ತೆ.. ಹಾಗಿದ್ರೆ ಅದನ್ನು ಸಮಾಧಾನ ಮಾಡೋದು ಹೇಗೆ? +++++++++++++++++++++++++++
ದೊಡ್ಡ ಕಾರಣಗಳೇ ಬೇಕಿಲ್ಲ. ಆಫೀಸಲ್ಲಿ ದಿನಾ ಕಂಡ ಕೂಡ್ಲೇ ಮಾತಾಡೋರು ಒಂದಿನ ಆ ಕಡೆ ನೋಡ್ಕೊಂಡು ಹೋದ್ರೆ, ಪಕ್ಕದಲ್ಲಿ ಕೂತೋರು ನಮ್ಮ ಮಾತಿಗೆ ಹೂಂಗುಡದೇ ಹೋದ್ರೆ, ಬೇಕೂಂತಲೇ ಏನೋ ಕೊಂಕು ಮಾತಾಡಿದ್ರೆ... ಒಮ್ಮೆಗೇ ಮನಸು ಮುಚ್ಚಿಕೊಳ್ಳಲು ಶುರು ಮಾಡುತ್ತೆ. ಗರ್ಭಸ್ಥ ಶಿಶು ಕೈಕಾಲುಗಳನ್ನೆಲ್ಲ ಎಳೆದುಕೊಂಡು ಸಣ್ಣ ಚೆಂಡು ಥರ ಆಗುತ್ತಲ್ಲ, ಹಾಗೆ ಮುದುಡಿಕೊಳ್ಳುತ್ತದೆ. ಏನೂ ಬೇಡ ಎಂಬ ಭಾವ, ಯಾಕೆ ಹಾಗೆ ಮಾಡಿದ್ರು ಎಂಬ ಚಿಂತೆ? ಮಾತಿಗೂ ಮನಸಿಲ್ಲ. ಕೆಲಸವೂ ಸಾಗೊಲ್ಲ.
ಮನೆಯಲ್ಲಿ ಈ ತರ ಆಗಿಬಿಟ್ಟರೆ ಹೋಗಿ ಕೋಣೆಯಲ್ಲಿ ಬಾಗಿಲು ಹಾಕೋಣ ಅಂತಾನೋ, ನೆಲದಲ್ಲಿ ಹಾಗೇ ಬಿದ್ಕೊಳೋಣ ಅಂತಾನೋ ಆಗ್ತದೆ. ಒಂದು ರೀತಿಯ ಏಕಾಂಗಿ ಭಾವ ಸಂಚಾರ.
ಇದು ಎಲ್ಲರಿಗೂ ಸಹಜವಾಗಿ ಆಗೋ ಸಂಗತಿ. ಕೆಲವರು ಇದನ್ನು ಮೆಟ್ಟಿ ನಿಲ್ಲಬಹುದು. ಹೆಚ್ಚಿನವರಿಗೆ ತಲೆಯೊಳಗೆ ಗಿರ್ರನೆ ತಿರುಗ್ತಾ ಇರ್ತದೆ. ಹೀಗಾಗಿ ಯಾವ ಕೆಲಸವೂ ಸರಿ ಆಗಿ ಆಗಲ್ಲ.
ಏನು ಮಾಡೋಣ? ಇಂಥ ಪರಿಸ್ಥಿತಿಯಿಂದ ಹೊರಬರೋದು ಕಷ್ಟವೇ ಅಂತ ಕೇಳಿದ್ರೆ ಅಷ್ಟೇನೂ ಕಷ್ಟ ಅಲ್ಲ. ಆದರೆ ಸುಲಭದಲ್ಲಿ ಬಗೆಹರಿಯುವುದೂ ಇಲ್ಲ. ಬೇಜಾರು ಹುಟ್ಟಿದ ಜಾಗದಲ್ಲೇ ಪರಿಹಾರವೂ ಇರ್ತದೆ. ಅದನ್ನು ಹುಡುಕಿಕೊಳ್ಳಬೇಕು.
ನಾವು ಯಾರೋ ಮಾತಾಡಿಲ್ಲ ಅಂದಾಗ ನೆಗ್ಲೆಕ್ಟ್ ಮಾಡಿದ್ರು ಅಂದ್ಕೊಂಡು ಕೊರಗ್ತೇವೆ. ನಿಜಕ್ಕೂ ಅವರ ಉದ್ದೇಶ ಅದಾಗಿತ್ತಾ ಅಥವಾ ಆಕಸ್ಮಿಕವೋ ಎಂಬುದನ್ನು ಅರಿತುಕೊಂಡ್ರೆ ಸಮಸ್ಯೆ ಅಲ್ಲಿಗೇ ಪರಿಹಾರ.
ಆದರೆ ಕೆಲವೊಮ್ಮೆ ತಕ್ಷಣಕ್ಕೆ ಭರಿಸಲಾಗದ ಏನೋ ಸಣ್ಣ ಸಂಗತಿಗಳಿರ್ತವೆ. ಅವುಗಳನ್ನು ಸರಿ ಮಾಡ್ಕೊಳೋದಕೆ ಟೈಮ್ ಬೇಕಿರಬಹುದು. ಆಗ ಟೈಮ್ ಕೊಡೋದೇ ಒಳ್ಳೆದು.
ಹಾಗಂತ, ಈ ನಡುವಿನ ಬಿಡುವಿನಲ್ಲಿ ಮಂಕಾದ ಮನವನ್ನು ಸಂತೈಸೋದು ಹೇಗೆ?
ನಿಜ ಅಂದ್ರೆ ಮನಸ್ಸನ್ನು ಮಂಕು ಕವಿಯದಂತೆ ಕಾಪಾಡಿಕೊಳ್ಳಬೇಕು. ಯಾಕೆಂದ್ರೆ ಹಾಗಾದಾಗ ನಾವು ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ತೇವೆ. ಆದರೂ ಆ ಮೂಡ್ ನಲ್ಲೂ ಒಂದು ಬದಲಾವಣೆ ಬೇಕು ಅಂದ್ರೆ ಒಂದು ವಿಷಾದ ಗೀತೆಯನ್ನು ಕೇಳಬಹುದು, ಅದಕ್ಕೆಂದೇ ಪೂರಕವಾದ ಸಂಗೀತ ಆಲಿಸಬಹುದು. ನಮ್ಮ ನಿಲುಮೆಗಳನ್ನು ಒಂದಿಷ್ಟು ಮನನ ಮಾಡಬಹುದು? ಅಗತ್ಯ ಬಿದ್ರೆ ಒಂದಿಷ್ಟು ಕಣ್ಣೀರೂ ಹಾಕಬಹುದು.
ಆದರೆ ಇದೆಲ್ಲ ದೀರ್ಘವಾಗಿರಬಾರದು. ಮಂಕಿನಿಂದ ಮನಸನ್ನು ಆಚೆಗೆ ಎಳೆದು ತರುವ ನಿಟ್ಟಿನಲ್ಲಿ ಏನಾದರೂ ಟಾಸ್ಕ್ ಕೊಡಲೇಬೇಕು. ಅದು ಏನೋ ಹೊಸ ಸಂಗತಿಯ ಅರಿವು ಇರಬಹುದು, ಯಾವುದೋ ಆಟ ಇರಬಹುದು, ಒಂದಿಷ್ಟು ವಾಕಿಂಗ್ ಇರಬಹುದು, ಒಂದು ಮೈದಣಿವ ನೃತ್ಯ ಇರಬಹುದು, ಯಾರಿಗೋ ಒಂದು ಫೋನ್ ಇರಬಹುದು, ಒಂದು ಸಿನಿಮಾನೇ ಇರಬಹುದು. ಸ್ವಲ್ಪ ಡೈವರ್ಟ್ ಆಗೋ ಕೆಲಸ ಬೇಕೇ ಬೇಕು.
ನೆನಪಿರಲಿ, ನೋವು ನಮ್ಮ ಆಪ್ತರಿಂದ ಆಗಿದ್ದರೆ ಸೇಡು ತೀರಿಸುವ ಭರದಲ್ಲಿ ಅವರಿಗೆ ಇಷ್ಟವಿಲ್ಲದ ವ್ಯಕ್ತಿಗಳ ಜತೆ ಹೆಚ್ಚು ಬೆರೆಯುವ ಕೆಲಸ ಮಾಡಬೇಡಿ. ಅದು ದೊಡ್ಡ ಯಾತನೆಗೆ ಕಾರಣವಾದೀತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.