



ಬ್ರಹ್ಮಾವರ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಮೂವರು ಅಂತರ್ ರಾಜ್ಯ ಕಳ್ಳರನ್ನು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಕಳ್ಳರನ್ನು ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಕೆರೆಬೆಟ್ಟು ನಿವಾಸಿ ದಿಲೀಪ್ ಶೆಟ್ಟಿ, ಕೊಯಮುತ್ತೂರಿನ ಮೆಟ್ಟುಪಾಳ್ಯಂ ನಿವಾಸಿ ರಾಜನ್ ಹಾಗೂ ಜಡಯಂ ಪಾಳ್ಯಂ ನಿವಾಸಿ ಷಣ್ಮುಗಂ ಬಂಧಿತ ಆರೋಪಿಗಳು. ದಿಲೀಪ್ ಶೆಟ್ಟಿ ಎಂಬಾತನು ಸ್ಯಾಂಟ್ರೋ ಕಾರು ಮತ್ತು ಓಮಿನಿ ಕಾರನ್ನು ಬಳಸಿಕೊಂಡು ಕುಖ್ಯಾತ ಕಳ್ಳ ರಾಜನ್, ವಿಜಯನ್ ಹಾಗೂ ಸಜಿತ್ ವರ್ಗಿಸ್ ಇವರೊಂದಿಗೆ ಬಂದು ಹಾಸನ, ದ.ಕ ಮತ್ತು ಉಡುಪಿ ಭಾಗದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದನು ಎನ್ನಲಾಗಿದೆ. ಹಾವಂಜೆ ಶೇಡಿಗುಳಿ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್, ಬೆಳ್ಳಿಯ ಆಭರಣಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧಿತರನ್ನು ಬಂಧಿಸಿ ವಿಚಾರಿಸಿದಾಗ ಬ್ರಹ್ಮಾವರ ಠಾಣಾ ವ್ಯಾಪ್ತಿಯ 2 ಮನೆ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1 ಮನೆ ಕಳ್ಳತನ ಹಾಗೂ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 2 ಮನೆ ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ಕಳವು, ಚಿನ್ನಾಭರಣ ಕಳವು ಮಾಡಿರುವುದು ತಿಳಿದುಬಂದಿರುತ್ತದೆ. ಕಳ್ಳತನ ಮಾಡಿರುವ ಸೊತ್ತುಗಳನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಅಡವಿಟ್ಟಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ದಿಲೀಪ್ ಶೆಟ್ಟಿ ಹಾಗೂ ರಾಜನ್ ಕಡೆಯಿಂದ ಸುಮಾರು 13 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ಮೌಲ್ಯದ 500ಗ್ರಾಂ ಬೆಳ್ಳಿ ಆಭರಣ ಸ್ಯಾಂಟ್ರೋ ಕಾರು ಸಹಿತ ಸುಮಾರು 20 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು, 5 ಮನೆ ಕಳ್ಳತನ ಪ್ರಕರಣಗಳನ್ನು ಭೇಧಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.