



ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಿರಂತರ ಹತ್ತು ದಿನಗಳ ಕಾಲ ಸಂಪನ್ನಗೊಳ್ಳಲಿರುವ ನವರಾತ್ರಿ ಮಹೋತ್ಸವದ ದೇವತಾರಾಧನೆಯಾಗಿ ದಿನಂಪ್ರತಿ ಜೋಡಿ ಚಂಡಿಕಾಯಾಗ ದುರ್ಗಾ ನಮಸ್ಕಾರ ಪೂಜೆ, ಕಲ್ಪೋಕ್ತ ಪೂಜೆ ಸಹಿತ ರಂಗ ಪೂಜೆ, ಧಾರ್ಮಿಕ ಕಾರ್ಯಕ್ರಮವಾಗಿ ನೆರವೇರಿತು. ಕ್ಷೇತ್ರದ ನವಶಕ್ತಿ ವೇದಿಕೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಕ್ಷೇತ್ರದ ನಾಟ್ಯ ರಾಣಿ ಗಂಧರ್ವ ಕನ್ಯೆಯ ಪ್ರೀತ್ಯರ್ಥವಾಗಿ ದುರ್ಗಾ ಆದಿಶಕ್ತಿ ದೇವಿಯ ಅನುಗ್ರಹಕ್ಕಾಗಿ ಹಲವಾರು ನೃತ್ಯ ತಂಡದ ನೃತ್ಯಾರ್ಥಿಗಳು ಕಲಿಕಾ ಸಾಧನೆಗಾಗಿ ಶ್ರದ್ದಾಪೂರ್ವಕವಾಗಿ ಸೇವೆ ಸಲ್ಲಿಸಿದರು.

ಮುಂಬಯಿಯ ಸುರೇಶ್ ಮತ್ತು ಅಖಿಲಾ ದಂಪತಿಗಳಿಂದ ಹಾಗೂ ರಾಜೇಂದ್ರ ಹಾಗೂ ರಾಧಾ ನಾಡರ್ ಇವರಿಂದ ಜೋಡಿ ಚಂಡಿಕಾಯಾಗ ಶ್ರೀಮತಿ ಶ್ರೀ ಮತ್ತು ಶ್ರೀಮತಿ ಶ್ವೇತಾ ನಕುಲ್ ಅವರಿಂದ ದುರ್ಗಾ ನಮಸ್ಕಾರ ಪೂಜೆ ರಂಗ ಪೂಜೆ ಧಾರ್ಮಿಕ ಕಾರ್ಯಕ್ರಮವಾಗಿ ಸಂಪನ್ನಗೊಂಡಿತು.
ಬ್ರಾಹ್ಮರಿ ನಾಟ್ಯಾಲಯದ ವಿ ಭವಾನಿ ಶಂಕರ್ ಅವರ ಶಿಷ್ಯರಿಂದ, ನರ್ತಕಿ ನಾಟ್ಯಾಲಯದ ಶಾಂಭವಿ ಜಿ. ಆಚಾರ್ಯ ಅವರ ಶಿಷ್ಯರಿಂದ, ಸೃಷ್ಟಿ ನೃತ್ಯ ಕುಠೀರದ ಡಾ ಮಂಜರಿ ಚಂದ್ರ ಅವರ ಶಿಷ್ಯರಿಂದ, ಮತ್ತು ಸ್ಥಳೀಯ ಕಲಾವಿದರಾದ ಪ್ರಣವಿ ಶೆಟ್ಟಿಗಾರ್ ಶರಣ್ಯಾ, ಇಶಿಕಾ, ಆರಾಧ್ಯಾ, ಅಕ್ಷರ ಹಾಗೂ ವಿದುಷಿ ಧನ್ಯಶ್ರೀ ಪ್ರಭು ಹಾಗೂ ಅವರ ಶಿಷ್ಯರಿಂದ ನೃತ್ಯ ಸೇವೆ ಸಮರ್ಪಿಸಲ್ಪಟ್ಟಿತು. ಉಪ್ಪುರು ಭಾಗ್ಯಲಕ್ಷ್ಮಿ ನೇತೃತ್ವದ ಕಲಾ ನಿಧಿ ತಂಡದ ಗಾಯಕರಿಂದ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಜಾನಪದ ಭಾವಗೀತೆಗಳ ರಸದೌತಣ ನೆರವೇರಿತು. ಸಾಂಸ್ಕೃತಿಕ ನೃತ್ಯ ಕಲಾ ಬಳಗ ಕುಂಜಿಬೆಟ್ಟು ಇವರಿಂದ ಕರಗ ನೃತ್ಯ ಯಕ್ಷ ನೃತ್ಯ ಜಾನಪದ ನೃತ್ಯ ಮತ್ತು ವಿಶೇಷವಾದ ಪಣ ನೃತ್ಯ ಮನೋರಂಜನ ಕಾರ್ಯಕ್ರಮವಾಗಿ ಮೂಡಿಬಂದಿತು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಗಾನ ನಾಟ್ಯ ಸೇವೆ ನೀಡುವ ಕಲಾವಿದರು ಗತಕಾಲದ ಕ್ಷೇತ್ರ ರಚನೆಗೆ ಕಾರಣೀಭೂತರಾದ ಕ್ಷೇತ್ರ ಗುರುಗಳಾಗಿ ಗುರುತಿಸಲ್ಪಟ್ಟು ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಪೂಜಿಸಲ್ಪಡುತ್ತಿರುವ ಕಪಿಲ ಮಹರ್ಷಿಗಳ ಅನುಗ್ರಹಕ್ಕಾಗಿ ಸರತಿ ಸಾಲಿನಲ್ಲಿ ತೆರಳುತ್ತಿರುವುದು ಕ್ಷೇತ್ರ ಗುರುಗಳ ಪ್ರಾಬಲ್ಯಕ್ಕೆ ಸಾಕ್ಷಿ ಭೂತವಾದಂತಿತ್ತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.