



ಹೆಬ್ರಿ : ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಪರಮಪುರುಷ ಶ್ರೀಕೃಷ್ಣ. ಶ್ರಾವಣ ಮಾಸದ ಶುಕ್ಲಪಕ್ಷ ದ ಅಷ್ಟಮಿಯಂದು ಮಥುರೆಯ ಧೂರ್ತ ದೊರೆ ಕಂಸನ ಸೆರೆಮನೆಯಲ್ಲಿ ದೇವಕಿ-ವಸುದೇವರ ಎಂಟನೇ ಮಗುವಾಗಿ ಜನಿಸಿದ ಕೃಷ್ಣ. ಚತುರ್ಬಾಹುಗಳನ್ನುಳ್ಳವನಾಗಿ, ಒಂದೊಂದು ಕೈಯಲ್ಲೂ ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದು, ಕೊರಳಲ್ಲಿ ಕೌಸ್ತುಭ ಹಾರ ಧರಿಸಿ, ಹಳದಿ ವಸ್ತ್ರ ತೊಟ್ಟು, ವಜ್ರ ವೈಢೂರ್ಯಗಳಿಂದ ಅಲಂಕೃತವಾಗಿದ್ದ ಕಿರೀಟಧಾರಿಯಾಗಿ, ನೀಳ ಕೇಶರಾಶಿಯುಳ್ಳವನಾಗಿ, ಅಮೂಲ್ಯ ತೋಳಬಂದಿ, ಕಡಗ, ಕರ್ಣಕುಂಡಲಗಳೇ ಮೊದಲಾದ ಆಭರಣಗಳನ್ನು ಧರಿಸಿ, ಗಗನದಲ್ಲಿ ಝಗಮಗಿಸುವ ಕಾರ್ಮೋಡದಂತೆ ಫಳಫಳಿಸುತ್ತಾ ಭೂಮಿಗೆ ಬಂದ ಶ್ರೀಕೃಷ್ಣ.
ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ಕಾರ್ಯ ವಾದ-ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಉದ್ದೇಶವಂತೂ ಎದ್ದು ಕಾಣುತ್ತಿತ್ತು. ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ ಎಂದು ಶ್ರೀ ಜಂಗಮೇಶ್ವರ ಮಠದ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಹೇಳಿದರು.
ಅವರು ಸೆ.7 ರಂದು ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ನಡೆದ 20 ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಶ್ರೀ ಮಠದ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ನಾಗರಾಜ ನಾಯಕ್, ಮಹಿಳಾ ಭಜನೆ ಮಂಡಳಿ ಅಧ್ಯಕ್ಷೆ ವೀಣಾ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಹಲವು ದಶಕಗಳಿಂದ ನಿಸ್ವಾರ್ಥವಾಗಿ ದೇವಸ್ಥಾನದ ವಿವಿಧ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ ಹಿರಿಯ ಚೇತನ ಕಾಡುಹೊಳೆ ಬೆಟ್ಟಿನಮನೆ ಸುಂದರ ಶೆಟ್ಟಿ ಮತ್ತು ಕಳೆದ 20 ವರ್ಷಗಳಿಂದ ಮಕ್ಕಳಿಗಾಗಿ ನಡೆದ ರಾಮಾಯಣ ಸೇರಿದಂತೆ ಹಲವಾರು ಧಾರ್ಮಿಕ ಹಿನ್ನೆಲೆಯುಳ್ಳ ಪರೀಕ್ಷೆಗಳ ಮೇಲುಸ್ತುವಾರಿ ವಹಿಸುತ್ತಿರುವ ನಿವೃತ್ತ ಅಧ್ಯಾಪಕ ಅಜೆಕಾರು ವೆಂಕಟರಮಣ ಉಪಾದ್ಯಾಯ ಇವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಜ್ಯೋತಿ ಹರೀಶ್ ಸ್ವಾಗತಿಸಿದರು, ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ರಾಮಾಯಣ ಪರೀಕ್ಷೆ, ಮುದ್ದು ಕೃಷ್ಣ ವೇಷ ಸ್ಪರ್ಧೆ, ಆಟೋಟ ಸ್ಪರ್ಧೆ ವಿಜೇತ ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು. ನಂತರ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.