



ಉಡುಪಿ : ಕೊಡಗು ಜೆಲ್ಲೆಯ ಕುಶಾಲನಗರದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ಸ್ ಅಸೋಸಿಯೇಷನ್ ಎಂಬ ಮುಖ್ಯ ಕಚೇರಿಯನ್ನು ಸ್ಥಾಪಿಸಲಾಗಿ, ಉಡುಪಿಯ ಮೈಸ್ ಪ್ರಧಾನ ಕಚೇರಿಯಲ್ಲಿ ಇದರ ಉದ್ಘಾಟನಾ ಸಮಾರಂಭವು ಮೇ.14 ರಂದು ನಡೆಯಿತು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅಸೋಸಿಯೇಷನ್ ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮೈಸ್ ಸಂಸ್ಥೆಯು ಪಟ್ಟಣದಲ್ಲಿ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾಧಾರಿತ ಹಾಗೂ ಮೌಲ್ಯಾಧಾರಿತ ಕಂಪ್ಯೂಟರ್ ಶಿಕ್ಷಣವನ್ನು ದೇಶದ ನಾನಾ ಕಡೆಗಳಲ್ಲಿ ನೀಡುತ್ತಿರುವುದು ಪ್ರಶಂಸನೀಯವಾಗಿದೆ. ಆದರೆ ಇತ್ತೀಚೆಗೆ ಕೊರೋನಾ ಮಹಾಮಾರಿಯಿಂದಾಗಿ ಕಂಪ್ಯೂಟರ್ ಶಿಕ್ಷಣ ಕ್ಷೇತ್ರದಲ್ಲೂ ಸಮಸ್ಯೆಗಳು ಹೆಚ್ಚಾಗಿವೆ ಎಂದು ತಿಳಿದು ಬಂತು. ಕಂಪ್ಯೂಟರ್ ತರಬೇತಿ ಪಡೆಯುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ನಿಮ್ಮ ಕುಂದುಕೊರತೆಗಳ ಬಗ್ಗೆ ನನಗೆ ಅರಿವಿದೆ. ಸರಕಾರದ ನೆಲೆಯಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಸಹಾಯಧನ, ಕೌಶಲ್ಯ ತರಬೇತಿ, ಉದ್ಯೋಗದ ಬಗ್ಗೆ ಸವಲತ್ತುಗಳನ್ನು ಸರಕಾರದಿಂದ ದೊರಕಿಸಿಕೊಡಲು ನಿಮ್ಮ ಅಸೋಸಿಯೇಷನ್ ಜೊತೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.
ಅಸೋಸಿಯೇಷನ್ ಲಾಂಛನವನ್ನು ಅನಾವರಣಗೊಳಿಸಿದ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಪ್ರಧಾನ ಮಂತ್ರಿ ಯವರು ದೇಶದಲ್ಲಿ ಡಿಜಿಟಲ್ ಕೇಂದ್ರಗಳನ್ನು ಸ್ಥಾಪಿಸಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗಳು ಪ್ರಗತಿಯಾಗುತ್ತಿದೆ. ಮೈಸ್ ತರಬೇತಿ ಕೇಂದ್ರಗಳೂ ದೇಶದಲ್ಲಿ ಮುಂಚೂಣಿಯಲ್ಲಿದೆ. ನಿಮ್ಮ ಕೆಲವೊಂದು ಬೇಡಿಕೆಗಳ ಈಡೇರಿಕೆಗೆ ನನ್ನಿಂದ ಏನಾಗಬೇಕು? ಅದನ್ನು ನಾನು ಈಡೇರಿಸಲು ಸಹಾಯ ಮಾಡುತ್ತೇನೆ. ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಮಂತ್ರಿ ಅಶ್ವಥ್ ನಾರಾಯಣರವರಿಗೆ ಮನವಿ ಸಲ್ಲಿಸಿ ಅನುಸರಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಕಂಪ್ಯೂಟರ್ ತರಬೇತಿಯ ಜೊತೆಗೆ ಉದ್ಯೋಗಾಧರಿತ ಬೇರೆ ಬೇರೆ ವಿಷಯಗಳ ಬಗ್ಗೆ ಕೌಶಲ್ಯಧಾರಿತ ಕಂಪ್ಯೂಟರ್ ತರಬೇತಿಗೆ ಪ್ರಾಮುಖ್ಯತೆ ನೀಡಿದರೆ, ಉದ್ದೇಶ ಸಫಲತೆ ಕಾಣಬಹುದು. ನಿಮ್ಮ ಪ್ರಮುಖ ಬೇಡಿಕೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇನೆ ಎಂದು ಉಡುಪಿ ಜಿಲ್ಲಾ ಕೌಶಲ್ಯ ಕರ್ನಾಟಕ ಅಭಿವೃದ್ಧಿ ಅಧಿಕಾರಿ ಜಗದೀಶ್ ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಮೈಸ್ ಮುಖ್ಯ ಕಚೇರಿಯ ಪ್ರಾಂಶುಪಾಲೆ ಸುಪ್ರಿತಾ ಎಸ್. ಅಮೀನ್ ಮಾತನಾಡಿ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೆ. ಪಿ. ವಹಿಸಿದ್ದರು. ಅವರು ಸ್ವಾಗತಿಸಿ ಮಾತನಾಡಿ ನಮ್ಮೀ ಅಸೋಸಿಯೇಷನ್ ಕರ್ನಾಟಕ ಸರಕಾರದಿಂದ ನೋಂದಾಯಿಸಿದ್ದು ರಾಜ್ಯ ಮಟ್ಟದ ಒಕ್ಕೂಟವಾಗಿದೆ. ಭಾರತ ದೇಶದ ಮುಂಚೂಣಿ ತರಬೇತಿ ಕೇಂದ್ರವಾಗಿದ್ದು ಗಮನಾರ್ಹ ಸೇವೆ ಸಲ್ಲಿಸುತ್ತಿದೆ. ಇತ್ತೀಚೆಗೆ ಕಾರಣಾಂತರಗಳಿಂದ ತರಬೇತಿ ಕೇಂದ್ರಗಳಿಗೆ ಬಂದು ಕಲಿಯುವವರ ಸಂಖ್ಯೆ ಕಡಿಮೆಯಾಯಿತು. ತರಬೇತಿ ಕೇಂದ್ರದ ಮಾಲೀಕರು ನಷ್ಟ ಅನುಭವಿಸಬೇಕಾಯಿತು. ಸರಕಾರದಿಂದ ಯಾವುದೇ ಸಹಾಯ ಈವರೆಗೆ ದೊರೆತ್ತಿಲ್ಲ. ರಾಜ್ಯದ ತರಬೇತಿ ಕೇಂದ್ರಗಳನ್ನು ಒಟ್ಟು ಸೇರಿಸಿ ಒಕ್ಕೂಟವನ್ನು ರಚಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ತರಬೇತಿ ನೀಡಿ ಸಹಕಾರ ನೀಡುವುದೇ ನಮ್ಮ ಉದ್ದೇಶವಾಗಿದೆ. ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲು ಆಯ್ಕೆ ಮಾಡುವಾಗ ಮೈಸ್ ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡುವುದು. ಸರಕಾರಿ ಕೆಲಸಗಳಿಗೆ ಆಯ್ಕೆ ಮಾಡುವಾಗ ಮೈಸ್ ಕಂಪ್ಯೂಟರ್ ಕೇಂದ್ರಗಳನ್ನು ಆಯ್ಕೆ ಮಾಡುವುದು. ಸರಕಾರಿ ಕೆಲಸಗಳಿಗೆ ಆಯ್ಕೆ ಮಾಡುವಾಗ ಮೈಸ್ ನ ಸರ್ಟಿಫಿಕೇಟನ್ನು ಪರಿಗಣಿಸುವುದು. ಇವೇ ಮೊದಲಾದ ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಬೇಡಿಕೆಗಳನ್ನು ಮುಂದಿಟ್ಟು ಸರಕಾರ ಮಟ್ಟದಲ್ಲಿ ಅಸೋಸಿಯೇಷನ್ ಮೂಲಕ ಈಡೇರಿಕೆಗೆ ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ನಾವೆಲ್ಲರು ಸಂಘಟಿತರಾಗಿ ಅಸೋಸಿಯೇಷನನ್ನು ಬಲಗೊಳಿಸೋಣವೆಂದು ತಿಳಿಸಿದರು.
ಸಿಟಿಸಿಎ ಪದಾಧಿಕಾರಿಗಳಿಗೆ ಮತ್ತು ನಿರ್ದೇಶಕರುಗಳಿಗೆ ಪ್ರಮಾಣವಚನ ಬೋಧಿಸಿ ಎಲ್ಲರಿಗೂ ಸ್ಮರಣಿಕೆ ನೀಡಿ, ಗುರುತಿನ ಚೀಟಿ ವಿತರಿಸಲಾಗಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮೈಸ್ ಪ್ರಧಾನ ಕಚೇರಿಯ ಆಡಳಿತಾಧಿಕಾರಿ ಗಾಯತ್ರೀ ಉಪಾಧ್ಯಾಯ, ಕೋಶಾಧಿಕಾರಿ ಶ್ರೀರಾಮ ಗೌರಿಬಿದನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಉಪಾಧ್ಯಕ್ಷ ಹೆಬ್ರಿ ಮೈಸ್ ನ ಕಬ್ಬಿನಾಲೆ ರಾಮಚಂದ್ರ ಭಟ್ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದ್ದು ಪ್ರಸ್ತಾಪಿಸಿದರು. ಮುಖ್ಯ ಕಾರ್ಯದರ್ಶಿ ರಫೀಕ್ ಎಂ. ಬ್ಯಾರಿ ಸಾಗರ ಕಾರ್ಯಕ್ರಮಕ್ಕೆ ಸಹಕರಿಸಿ ವಂದಿಸಿದರು. ನಾನಾ ಜಿಲ್ಲೆಗಳಿಂದ ಆಗಮಿಸಿದ ಸಿಟಿಸಿಎ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.