



ತಿರುವನಂತಪುರ:ಸೋಮವಾರದ (ಏ.24)ಕೇರಳ ಭೇಟಿ ವೇಳೆ ಆತ್ಮಹತ್ಯಾ ದಾಳಿ ನಡೆಸುವುದಾಗಿಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಲಾಗಿದೆ.
ಆತ್ಮಹತ್ಯಾ ದಾಳಿ ನಡೆಯಲಿದೆ ಎಂದು ಅನಾಮಿಕ ವ್ಯಕ್ತಿಯ ಹೆಸರಿನಲ್ಲಿ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರ ರವಾನಿಸಲಾಗಿದೆ.
ಇದೇ ವೇಳೆ ಪ್ರಧಾನಿ ಭದ್ರತೆಗೆ ನಿಯೋಜಿಸಲಾಗಿದ್ದ ಅತಿ ಗಣ್ಯರ (ವಿವಿಐಪಿ) ಭದ್ರತಾ ಯೋಜನೆ ಮತ್ತು ಸಿಬ್ಬಂದಿಯ ವಿವರವೂ ಸೋರಿಕೆಯಾಗಿದೆ.
ಬಿಜೆಪಿ ಕಚೇರಿಗೆ ಬಂದಿರುವ ಬೆದರಿಕೆ ಪತ್ರ ಆತಂಕ ಮೂಡಿಸಿದ್ದು, ಬೆದರಿಕೆ ಪತ್ರದ ಕುರಿತು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ. ಎರ್ನಾಕುಲಂ ಮೂಲದ ಜೋಸೆಫ್ ಜಾನ್ ನಾಡುಮುತಮಿಲ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ಪತ್ರ ಬಂದಿದೆ ಎಂಬುದು ತನಿಖೆಯ ಬಳಿಕ ಗೊತ್ತಾಗಿದೆ.
ಪ್ರಧಾನಿ ಮೋದಿ ಅವರು ಸೋಮವಾರ ಸಂಜೆ 5 ಗಂಟೆಗೆ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡುವುದು ಸೇರಿದಂತೆ 2 ದಿನಗಳ ಭೇಟಿಯಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದಿಂದ ವಿಶೇಷ ವಾಯುಪಡೆಯ ವಿಮಾನದಲ್ಲಿ ಕೇರಳಕ್ಕೆ ಆಗಮಿಸಿ, ಬಿಜೆಪಿ ರೋಡ್ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ತೇವರ ಸೇಕ್ರೆಡ್ ಹಾರ್ಟ್ ಕಾಲೇಜು ಮೈದಾನದಲ್ಲಿ ಬಿಜೆಪಿ ನೇತೃತ್ವದ ಯುವ ಸಂಘಟನೆಗಳು ಆಯೋಜಿಸಿರುವ ‘ಯುವಂ’ ಸಮಾವೇಶ ಉದ್ಘಾಟಿಸಲಿದ್ದಾರೆ.
ತಾಜ್ ಮಲಬಾರ್ ಹೋಟೆಲ್ನಲ್ಲಿ ಪ್ರಧಾನಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಮಂಗಳವಾರ ಬೆಳಗ್ಗೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ. ಬಳಿಕ ಸೆಂಟ್ರಲ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಇದೇ ವೇಳೆ 4 ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿರುವ ಮೋದಿ, ಟೆಕ್ನೋ ಸಿಟಿಗೆ ಶಂಕುಸ್ಥಾಪನೆ ಮತ್ತು ಕೊಚ್ಚಿ ವಾಟರ್ ಮೆಟ್ರೋವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.40ಕ್ಕೆ ಸೂರತ್ಗೆ ಪ್ರಧಾನಿ ಮರಳಲಿದ್ದಾರೆ
ಈ ಮಧ್ಯೆ, ಪ್ರಧಾನಿ ಮೋದಿ ಅವರ ಭೇಟಿಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿದೆ. ಎಡಿಜಿಪಿ ಇಂಟೆಲಿಜೆನ್ಸ್ ಸಿದ್ಧಪಡಿಸಿದ್ದ ಭದ್ರತಾ ಯೋಜನೆ ವಿವರ ಸೋರಿಕೆಯಾಗಿದೆ. ಭದ್ರತೆಯ ಹೊಣೆ ಹೊತ್ತಿರುವ ಅಧಿಕಾರಿಗಳ ವಿವರವೂ ಬಹಿರಂಗವಾಗಿದೆ.
49 ಪುಟಗಳ ವರದಿಯಲ್ಲಿ ವಿವಿಐಪಿ ಭದ್ರತೆಯ ಸಮಗ್ರ ಮಾಹಿತಿ ಇದೆ. ಸೋರಿಕೆ ಕುರಿತು ಗುಪ್ತಚರ ವಿಭಾಗದ ಎಡಿಜಿಪಿ ಟಿಕೆ ವಿನೋದ್ ಕುಮಾರ್ ತನಿಖೆ ಆರಂಭಿಸಿದ್ದಾರೆ. ಹೊಸ ಭದ್ರತಾ ಯೋಜನೆ ರೂಪಿಸಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.