



ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಸಿದ್ದ ದೇವಿ ದೇವಸ್ಥಾನಗಳಲ್ಲಿ ಒಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ದೂರದೂರುಗಳಿಂದ ಬರುವ ಭಕ್ತಾದಿಗಳು ದೇವರ ದರ್ಶನಕ್ಕೆ ಬರುವುದು ಇಲ್ಲಿನ ಮಹಿಮೆಯನ್ನು ಸಾರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆಗೆ ದೊಡ್ದ ಮಟ್ಟದ ಆದಾಯ ತರುವ ದೇವಾಲಯಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದೀಗ ಆ ದೇವಾಲಯದಲ್ಲಿ ಅನುವಂಶಿಕ ಆಡಳಿತ ಟ್ರಸ್ಟಿ ಆಗುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಕೊಡೆತ್ತೂರು ಗುತ್ತು ಕುಟುಂಬ ಬಂಟ ಸಮಾಜದ ಪುರಾತನ ಮನೆತನಕ್ಕೆ ಒಳಪಟ್ಟಿದ್ದು, ಇಲ್ಲಿನ ಹಿರಿಯ ಸದಸ್ಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿಯಾಗುವ ಪದ್ಧತಿ ಹಿಂದಿನಿಂದಲೂ ರೂಡಿಯಲ್ಲಿದೆ. ಅನುವಂಶಿಕವಾಗಿ ಬಂದಿರುವ ಆಡಳಿತ ಮೊಕ್ತೇಸರರು ಹಾಗೂ ಅನುವಂಶಿಕ ಅರ್ಚಕರು ಇಲ್ಲಿನ ಆಡಳಿತದ ಜವಾಬ್ದಾರಿ ಹೊತ್ತಿದ್ದು, ಆದ್ರೆ ಇದೀಗ ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರು ಅನುವಂಶಿಕವಾಗಿ ಬಂದವರಲ್ಲ ಎಂಬ ಗೊಂದಲ ಸೃಷ್ಟಿಯಾಗಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಆರು ಯಕ್ಷಗಾನ ಮೇಳ ಸೇರಿದಂತೆ ಶಾಲೆ, ಕಾಲೇಜುಗಳನ್ನೊಳಗೊಂಡಿದೆ. ಇದೆಲ್ಲದರ ಉಸ್ತುವಾರಿ ಆಡಳಿತ ಮೊಕ್ತೇಸರರಿಗೆ ಬರಲಿದೆ. ಈ ಕುರಿತಂತೆ ಅನುವಂಶಿಕ ಗುತ್ತು ಮನೆತನದ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಸ್ತುತ ಇರುವ ಟ್ರಸ್ಟಿಗೆ ಯಾವುದೇ ಅಧಿಕಾರವಿಲ್ಲವೆಂಬ ತೀರ್ಪನ್ನು ಕೋರ್ಟ್ ನೀಡಿದೆ.
ಪ್ರಸ್ತುತ ಇರುವ ಆಡಳಿತ ಮೊಕ್ತೇಸರಾದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಮನೆತನಕ್ಕೆ ಸೇರಿದವರಲ್ಲ ಎಂದು ಕೊಡೆತ್ತೂರು ಗುತ್ತು ಕುಟುಂಬಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪುತ್ತಿಗೆ ಗುತ್ತುವಿನ ಸನತ್ ಕುಮಾರ್ ಶೆಟ್ಟಿ 2017ರಲ್ಲಿ ಕೊಡೆತ್ತೂರು ಗುತ್ತಿನವನು ಎಂದು ಪ್ರತಿಪಾದಿಸಿಕೊಂಡು ಟ್ರಸ್ಟಿಯಾಗಿದ್ದಾರೆ ಎಂಬುದು ಕೊಡೆತ್ತೂರು ಗುತ್ತು ಮನೆತನದವರ ಆರೋಪವಾಗಿದೆ. ಹೀಗಾಗಿ ಈ ಕ್ರಮದ ವಿರುದ್ದ ದೇವಸ್ಥಾನ, ರಾಜ್ಯ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್, ಧಾರ್ಮಿಕ ಪರಿಷತ್, ಜಿಲ್ಲಾ ಧಾರ್ಮಿಕ ಪರಿಷತ್, ಸನತ್ ಕುಮಾರ್ ಶೆಟ್ಟಿಯವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಕೊಡೆತ್ತೂರು ಗುತ್ತು ಕುಟುಂಬ ಸದಸ್ಯರು ನ್ಯಾಯಾಲಯದ ಕದ ತಟ್ಟಿದ್ದರು.
ವಾದ ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಸನತ್ ಕುಮಾರ್ ಶೆಟ್ಟಿಯವರು ಪುತ್ತಿಗೆ ಗುತ್ತಿನವರು ಎಂದು ಘೋಷಿಸಿದೆ. ಇದರ ಜೊತೆ ಟ್ರಸ್ಟಿ ಆಗಲು ಅವರು ಅರ್ಹರಲ್ಲ, ಇದರ ಅಧಿಕಾರ ಕೊಡೆತ್ತೂರು ಗುತ್ತಿನವರಿಗೆ ಸಂಬಂಧಿಸಿದ್ದು ಎಂದು ಆದೇಶಿಸಿದೆ. ಈ ಕುರಿತು ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದ್ದು ಪುತ್ತಿಗೆಗುತ್ತು ಕುಟುಂಬದವರು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಟ್ರಸ್ಟಿ ಆಗುವಂತಿಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.